ADVERTISEMENT

ಎಚ್‌ಡಿಕೆ ಬಳಿ 7 ಸಚಿವರ ದಾಖಲೆ ಇದ್ದರೆ ಬಿಡುಗಡೆ ಮಾಡಲಿ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 20:18 IST
Last Updated 28 ಸೆಪ್ಟೆಂಬರ್ 2024, 20:18 IST
ಕನಕಪುರ ತಾಲ್ಲೂಕಿನ ಸಾತನೂರಿನಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಇದ್ದಾರೆ
ಕನಕಪುರ ತಾಲ್ಲೂಕಿನ ಸಾತನೂರಿನಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಇದ್ದಾರೆ   

\

ಕನಕಪುರ (ರಾಮನಗರ): ‘ಏಳು ಸಚಿವರಿಗೆ ಸಂಬಂಧಿಸಿದ ದಾಖಲೆ ನನ್ನ ಬಳಿ ಇವೆ ಎನ್ನುತ್ತಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವನ್ನು ಬಿಡುಗಡೆ ಮಾಡಲಿ. ಮಾಡಬೇಡಿ ಎಂದು ಅವರನ್ನು ಹಿಡಿದುಕೊಂಡವರು ಯಾರು?’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

‘ನನ್ನ ಬಳಿ ಇರುವ ದಾಖಲೆ ಬಿಡುಗಡೆ ಮಾಡಿದರೆ ಏಳು ಸಚಿವರು ರಾಜಿನಾಮೆ ಕೊಡಬೇಕಾಗುತ್ತದೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ  ತಾಲ್ಲೂಕಿನ ಸಾತನೂರಿನಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ದಾಖಲೆ ಬಿಡುಗಡೆ ಮಾಡಬೇಡಿ ಎಂದವರು ಯಾರು? ಮೊದಲು ಬಿಡುಗಡೆ ಮಾಡಲಿ’ ಎಂದರು.

ADVERTISEMENT

ಸಿ.ಎಂ ಹುದ್ದೆ ಅರ್ಥದಲ್ಲಿ ಹೇಳಿಲ್ಲ: ‘ರಾಜ್ಯದ ಸೇವೆ ಮಾಡಲು ನಾನು ಪ್ರಯತ್ನ ಮಾಡುತ್ತಿದ್ದೇನೆ. ನಾನಿಲ್ಲಿ ಡಿಸಿಎಂ ಆಗಿ ಬಂದಿಲ್ಲ. ವಿಧಾನಸೌಧದಲ್ಲಷ್ಟೇ ನಾನು ಡಿಸಿಎಂ. ಇಲ್ಲಿ ನಾನು ನಿಮ್ಮ ಪ್ರತಿನಿಧಿ’ ಎಂದು ಕನಕಪುರದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಹೇಳಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ, ‘ನೀವೆಲ್ಲಾ ಸೇವೆ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದೀರಿ ಎಂದಿದ್ದೇನೆ. ಮುಖ್ಯಮಂತ್ರಿ ಆಗುವುದಾಗಿ ನಾನು ಹೇಳಿಲ್ಲ. ನೀವು ಬೇರೆ ರೀತಿ ಕಲ್ಪನೆ ಮಾಡಿಕೊಂಡು ಏನೇನೊ ಸೃಷ್ಟಿಸಬೇಡಿ. ಈಗ ಡಿಸಿಎಂ ಆಗಿ ರಾಜ್ಯದ ಸೇವೆ ಮಾಡುತ್ತಿಲ್ಲವೆ. ಅದನ್ನು ಮಕ್ಕಳಿಗೆ ತಿಳಿಸಬೇಕಲ್ಲವೆ? ಅದನ್ನೇ ಭಾಷಣದಲ್ಲಿ ಹೇಳಿದ್ದೇನೆ’ ಎಂದರು.

‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ನಾನು ಹಾಗೂ ಎಐಸಿಸಿ ಅಧ್ಯಕ್ಷರು ಕೂಡ ಸ್ಪಷ್ಟಪಡಿಸಿದ್ದೇವೆ. ವಿರೋಧ ಪಕ್ಷದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಏನು ಬೇಕಾದರೂ ಹೇಳಬಹುದು. ಅದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ’ ಎಂದು ಹೇಳಿದರು.

ಕನಕಪುರದಲ್ಲಿ ಜೆಡಿಎಸ್‌ ಸದಸ್ಯತ್ವ ನೋಂದಣಿ ಅಭಿಯಾನ ಕುರಿತ ಪ್ರಶ್ನೆಗೆ, ‘ಸದಸ್ಯತ್ವ ಅಭಿಯಾನ ಮಾಡಬೇಡಿ ಎನ್ನಲಾಗುತ್ತದೆಯೇ? ಮಾಡಲಿ. ಸದಸ್ಯರಾಗುವವರು ಆಗಲಿ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.