ADVERTISEMENT

ಚನ್ನಪಟ್ಟಣ | ಇಡೀ ದಿನ ಡಿಕೆಶಿ ‘ಟೆಂಪಲ್ ರನ್‌’

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:52 IST
Last Updated 19 ಜೂನ್ 2024, 15:52 IST
ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೂಜೆ ಸಲ್ಲಿಸಿದರು.
ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೂಜೆ ಸಲ್ಲಿಸಿದರು.   

ಚನ್ನಪಟ್ಟಣ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಇಡೀ ದಿನ ತಾಲ್ಲೂಕಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮೊದಲು ತಾಲ್ಲೂಕಿನ ಕೆಂಗಲ್ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ, ನಗರದ ಎಂ.ಜಿ. ರಸ್ತೆಯ ನೀಲಕಂಠೇಶ್ವರ ದೇವಾಲಯ, ಕೋಟೆಯ ಕಾಳಮ್ಮ ದೇವಸ್ಥಾನ, ಕೋಟೆ ವರದರಾಜ ದೇವಸ್ಥಾನ, ಮಳೂರು ಅಪ್ರಮೇಯ ದೇವಸ್ಥಾನ, ದೇವರಹೊಸಳ್ಳಿ ಸಂಜೀವರಾಯ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನಂತರ ತಾಲ್ಲೂಕಿನ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷಪೂಜೆ ಸಲ್ಲಿಸಿದರು. ದೇವಸ್ಥಾನದ ಒಳಗೆ ಗರ್ಭಗುಡಿಯ ಮುಂದೆ ಕುಳಿತು ಚಿಕ್ಕ ಚಾಮುಂಡೇಶ್ವರಿ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಿದರು. ನಂತರ ಆರತಿ ಬೆಳಗಿ ಪೂಜೆ ಸಲ್ಲಿಸಿದರು.

ADVERTISEMENT

ತಾ.ಪಂ. ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಲ್ಲಿಂದ ನಗರದ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾತ್ರಿಯಾಗಿದ್ದರೂ ತಮ್ಮ ಕಾರ್ಯಕ್ರಮ ನಿಲ್ಲಿಸದೆ ಬಿ.ವಿ.ಪಾಳ್ಯ ಧರ್ಮರಾಯ  ದೇವಸ್ಥಾನ, ಹುಣಸನಹಳ್ಳಿ ಬಿಸಿಲಮ್ಮ ದೇವಸ್ಥಾನ, ನೇರಳೂರು ವೈದ್ಯನಾಥೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಡಿ.ಕೆ. ಶಿವಕುಮಾರ್ ಅವರ ಇಡೀ ದಿನ ದೇವಸ್ಥಾನಗಳ ಪೂಜೆ ಕಾರ್ಯಕ್ರಮ ಕುತೂಹಲ ಮೂಡಿಸಿತು. ಇಲ್ಲಿನ ಶಾಶಕರಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಸಂಸದರಾಗಿ ಆಯ್ಕೆಯಾದ ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಉಪ ಚುನಾವಣೆ ನಡೆಯುವ ಕಾರಣ ಡಿ.ಕೆ. ಶಿವಕುಮಾರ್ ಅವರ ದೇವಸ್ಥಾನ ಭೇಟಿ ಕಾರ್ಯಕ್ರಮಕ್ಕೆ ಮಹತ್ವ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.