ಮಾಗಡಿ: ಹಿರಿಯ ಅಂಗವಿಕಲ ನಾಗರಿಕರಿಗೆ ಅವಶ್ಯಕವಾಗಿ ಸಾಧನ ಸಲಕರಣೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣ ಪ್ರಭಾರ ಅಧಿಕಾರಿ ಶ್ರುತಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಹಾಗೂ ಅಲಿಂಕೋ ಸಂಸ್ಥೆ ವತಿಯಿಂದ ಹಿರಿಯ ನಾಗರಿಕರ ಮೌಲ್ಯಮಾಪನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನಲ್ಲಿ 5,200ಕ್ಕೂ ಹೆಚ್ಚು ಅಂಗವಿಕಲರಿದ್ದು ಅವರಿಗೆ ಬೇಕಾಗಿರುವ ಗುಣಮಟ್ಟದ ಸಲಕರಣೆ ನೀಡುವುದರಿಂದ ಅವರು ಯಾರ ಸಹಾಯವಿಲ್ಲದೆ ಓಡಾಡಲು ಅನುಕೂಲವಾಗುತ್ತದೆ. ಇದರ ಪ್ರಯೋಜನವನ್ನು ತಾಲ್ಲೂಕಿನ ಹಿರಿಯ ಅಂಗವಿಕಲರು ಪಡೆದುಕೊಳ್ಳಬೇಕು ಎಂದರು.
ತಾಲ್ಲೂಕು ಅಂಗವಿಕಲರ ಸಂಯೋಜಕ ಅಸ್ಸಾಂ ಪಾಷ ಮಾತನಾಡಿ, ತಾಲ್ಲೂಕಿನಲ್ಲಿರುವ 5 ಸಾವಿರಕ್ಕೂ ಹೆಚ್ಚು ಅಂಗವಿಕಲರಿಗೆ ಇಲಾಖೆಯಿಂದ ಈಗಾಗಲೇ ತ್ರೀಚಕ್ರ ವಾಹನ, ವಿವಾಹ ಪ್ರೋತ್ಸಾಹ ಧನ, ಶಿಶುಪಾಲನ ಭತ್ಯೆ, ವೀಲ್ ಚೇರ್, ವಾಕಿಂಗ್ ಸ್ಟಿಕ್ ನೀಡಲಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ತಾಲೂಕಿನ ಅನೇಕ ಹಿರಿಯ ಅಂಗವಿಕಲರು ಮೌಲ್ಯಮಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.