ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜಕಾರಣ ಅಂತ್ಯವಾಗುವುದಿಲ್ಲ. ಸಿ.ಪಿ.ಯೋಗೇಶ್ವರ ಅವರ ರಾಜಕಾರಣ ಅಂತ್ಯವಾಗುತ್ತದೆ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ಪ್ರಮೋದ್ ತಿರುಗೇಟು ನೀಡಿದರು.
ನಗರದ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜಕಾರಣ ಅಂತ್ಯವಾಗುತ್ತದೆ ಎಂದು ಉಡಾಫೆ ಹೇಳಿಕೆ ನೀಡುವ ಮೂಲಕ ಯೋಗೇಶ್ವರ ತಮ್ಮ ಗೌರವವನ್ನು ತಾವೇ ಕಳೆದುಕೊಂಡಿದ್ದಾರೆ. ಯಾರ ರಾಜಕಾರಣ ಅಂತ್ಯವಾಗುತ್ತದೆ ಎಂಬುದು ಅವರಿಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಅವರು ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಚಿಂತಿಸಿ, ತಾಲ್ಲೂಕಿನಲ್ಲಿ ಆಗಬೇಕಾಗಿರುವ ಕೆಲಸದ ಬಗ್ಗೆ ಮಾಹಿತಿ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ತಾಲ್ಲೂಕಿನ ಅಭಿವೃದ್ಧಿ ಮಾಡಲು ಬರುತ್ತಿರುವವರನ್ನು ಸ್ವಾಗತಿಸಬೇಕು. ಅವಶ್ಯ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಬೇಕು ಎಂದರು.
ತಾಲ್ಲೂಕಿನಲ್ಲಿ ಕಾಂಗ್ರೆಸ್ನ ಹೊಸ ಪರ್ವ ಪ್ರಾರಂಭವಾಗುತ್ತಿದೆ. ಇದರಿಂದ ಭಯ ಮತ್ತು ಆತಂಕಗೊಂಡಿರುವ ಯೋಗೇಶ್ವರ, ತಾಲ್ಲೂಕಿನ ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ. ಶಾಸಕರಾಗಿದ್ದ ಕುಮಾರಸ್ವಾಮಿ ಒಂದು ಬಾರಿಯೂ ಅಧಿಕಾರಿಗಳ ಸಭೆ ಮಾಡಿಲ್ಲ. ಜನಸಾಮಾನ್ಯರ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಹೇಳಿಲ್ಲ. ಈಗ ಶಾಸಕ ಸ್ಥಾನಕ್ಕೆ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾಲ್ಲೂಕಿನ ಅಭಿವೃದ್ಧಿ ಮಾಡಲು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಯೋಗೇಶ್ವರ ಅವರು ಇದನ್ನು ತಿಳಿದುಕೊಂಡು ಮಾತನಾಡಲಿ ಎಂದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಶಿವಮಾದು, ಪರಿಶಿಷ್ಟ ಜಾತಿ, ಪಂಗಡದ ವಿಭಾಗದ ನಗರಾಧ್ಯಕ್ಷ ವಸಂತಕುಮಾರ್, ನಗರಸಭೆ ಸದಸ್ಯ ವಾಸಿಲ್ ಆಲಿಖಾನ್, ಮುಖಂಡರಾದ ಮಲುವೇಗೌಡ, ಅಕ್ಕೂರು ಶೇಖರ್, ರಮೇಶ್, ಕರಣ್ ಆನಂದ್, ತಿಮ್ಮೇಶ್ ಪ್ರಭು, ಜಯಸ್ವಾಮಿ, ನಾಗೇಂದ್ರ, ಕೋಕಿಲರಾಣಿ, ರೇಣುಕಮ್ಮ, ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.