ಹಾರೋಹಳ್ಳಿ: ತಂದೆ ತಾಯಿ ಜಗಳದಲ್ಲಿ ಮಗು ಸಾವನ್ನಪ್ಪಿರುವ ದಾರುಣ ಘಟನೆ ಹಾರೋಹಳ್ಳಿ ತಾಲ್ಲೂಕಿನ ಗೋದೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೃತಪಟ್ಟ ಬಾಲಕನನ್ನು ಗೋದೂರು ಗೇಟ್ ಬಳಿ ವಾಸವಿದ್ದ ಸೋಮ ಕುಮಾರ್ ಮತ್ತು ಪೂರ್ಣಿಮಾ ದಂಪತಿ ಪುತ್ರ ದೀಕ್ಷಿತ್ ಗೌಡ (3) ಎಂದು ಗುರುತಿಸಲಾಗಿದೆ.
ಸೋಮಕುಮಾರ್ ಮತ್ತು ಪೂರ್ಣಿಮಾ ದಂಪತಿ ಯಾವಾಗಲೂ ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಸಣ್ಣ ವಿಷಯಕ್ಕೆ ಪ್ರಾರಂಭವಾದ ಜಗಳ ಮಗನ ಸಾವಿನಲ್ಲಿ ಕೊನೆಗೊಂಡಿದೆ.
ಪೂರ್ಣಿಮಾ ಜಿರಳೆಗೆ ಇಟ್ಟಿದ್ದ ಔಷಧಿಯನ್ನು ತಾನೂ ಕುಡಿದು ತನ್ನ ಮಗನಿಗೂ ಕುಡಿಸಿದ್ದಾರೆ. ವಿಷಯ ತಿಳಿದ ಮನೆಯವರು ತಾಯಿ, ಮಗ ಇಬ್ಬರನ್ನು ಪಕ್ಕದ ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ದೀಕ್ಷಿತ್ ಗೌಡ ಮೃತಪಟ್ಟಿದ್ದಾನೆ. ತಾಯಿ ಪೂರ್ಣಿಮಾ ಆರೋಗ್ಯವಾಗಿದ್ದು, ಮೃತ ಬಾಲಕನ ಮರಣೋತ್ತರ ಪರೀಕ್ಷೆ ನಡೆಸಿ ಬಾಲಕನ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.
ದೂರು ಪ್ರತಿ ದೂರು: ಪ್ರಕರಣ ಸಂಬಂಧ ತಂದೆ ಸೋಮಕುಮಾರ್ ಹಾಗೂ ತಾಯಿ ಪೂರ್ಣಿಮಾ ಇಬ್ಬರ ಮೇಲೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಹಾರೋಹಳ್ಳಿ ಪೋಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.