ಮಾಗಡಿ: ಪುರಸಭೆ ತ್ಯಾಜ್ಯ ಘಟಕದಲ್ಲಿ ಕಸಕ್ಕೆ ಬೆಂಕಿ ಹಚ್ಚುವುದರಿಂದ ನಿವಾಸಿಗಳಿಗೆ ಸಾಕಷ್ಟು ತೊಂದರೆ ಎದುರಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಕಲ್ಪನಾ ಶಿವಣ್ಣ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಿರುಮಲೆ ರಂಗನಾಥಸ್ವಾಮಿ ದೇವಸ್ಥಾನ ಆವರಣದಲ್ಲಿ ಭಾನುವಾರ ನಿಸರ್ಗ ಪರಿಚರಣ ಟ್ರಸ್ಟ್ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜನರು ಜಾಗೃತರಾಗದಿದ್ದರೆ ಮುಂದಿನ ಪೀಳಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.
ನಿಸರ್ಗ ಪರಿಚರಣ ಟ್ರಸ್ಟ್ ಅಧ್ಯಕ್ಷ ಎಚ್.ಎನ್.ಶಿವಲಿಂಗಯ್ಯ ಮಾತನಾಡಿ, ಕಾನೂನು ಪ್ರಕಾರ ತ್ಯಾಜ್ಯ ಘಟಕಗಳು ಕನಿಷ್ಠ ಮೂರು ಕಿ.ಮೀ ದೂರದಲ್ಲಿರಬೇಕು. ಆದರೆ, ಪುರಸಭೆ ರಂಗನಾಥಸ್ವಾಮಿ ದೇವಸ್ಥಾನದಿಂದ ಕೇವಲ 250 ಮೀಟರ್ ಅಂತರದಲ್ಲಿ ಸ್ಥಾಪಿಸಿದೆ. ಇದು ಕಾನೂನು ಬಾಹಿರವಾಗಿದೆ ಎಂದರು.
ಇದೇ ವೇಳೆ ರೈತ ರೇಣುಕಪ್ಪ, ಮುನಿರಾಜು, ತಿರುಮಲೆ ಶ್ರೀನಿವಾಸ್, ಗಿರೀಶ್, ಹನುಮಂತಯ್ಯ, ಗಂಗಣ್ಣ, ಗಂಗನರಸಿಂಹಯ್ಯ, ಬಸವರಾಜು, ರಂಗೇಗೌಡ, ವೆಂಕಟಸ್ವಾಮಿ, ಶಶಿಧರ್, ಶೇಷಾದ್ರಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.