ರಾಮನಗರ: ತಾಲ್ಲೂಕಿನ ಜೈಪುರ ಗ್ರಾಮದ ಲಕ್ಷ್ಮಿನರಸಿಂಹ ದೇವಸ್ಥಾನದಲ್ಲಿ ಸೋಮವಾರ ನಡೆದ ಮದುವೆಯಲ್ಲಿ ಪಾಯಸ ತಿಂದ 22 ಮಂದಿ ಅಸ್ವಸ್ಥರಾಗಿ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 10 ಮಕ್ಕಳು, 12 ಮಹಿಳೆಯರು ಮತ್ತು ಪುರುಷರಿದ್ದಾರೆ.
‘ಮಧ್ಯಾಹ್ನ ಮದುವೆಯಲ್ಲಿ ಅವರೆಕಾಳು, ಪಾಯಸ, ಅನ್ನ, ಸಾಂಬಾರು ಊಟ ಬಡಿಸಲಾಗಿತ್ತು. ಊಟ ಮಾಡಿದ ಕೆಲವರು ಪಾಯಸವನ್ನು ಮನೆಗೆ ತೆಗೆದುಕೊಂಡು ಹೋಗಿ ಕೆಲ ತಾಸಿನ ಬಳಿಕ ಸೇವಿಸಿದ್ದಾರೆ. ಸಂಜೆಯ 6 ಗಂಟೆ ಸುಮಾರಿಗೆ ಕೆಲವರಲ್ಲಿ ವಾಂತಿ ಮತ್ತು ಬೇಧಿ ಕಾಣಿಸಿಕೊಂಡಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಗಮನಿಸಿದ ಸ್ಥಳೀಯರು ಅಸ್ವಸ್ಥರನ್ನು ಕೂಡಲೇ ವಾಹನದಲ್ಲಿ ರಾಮನಗರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಅಸ್ವಸ್ಥರಾದವರಿಗೆ ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಸುಧಾರಿಸಿಕೊಳ್ಳುತ್ತಿದ್ದು ಆರೋಗ್ಯದ ಕುರಿತು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.
‘ಘಟನೆ ನಡೆದ ಜೈಪುರ ಗ್ರಾಮಕ್ಕೆ ವೈದ್ಯಾಧಿಕಾರಿಗಳು ತೆರಳಿ ಪಾಯಸದ ಮಾದರಿಯನ್ನು ಸಂಗ್ರಹಿಸಲಾಗಿದೆ. ಮಂಗಳವಾರ ಪಾಯಸವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿ ಕೊಡಲಾಗುವುದು. ವರದಿ ಬಂದ ಬಳಿಕ, ಜನರ ಅಸ್ವಸ್ಥತೆಗೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.