ಚನ್ನಪಟ್ಟಣ (ರಾಮನಗರ): ‘ಅಧಿಕಾರಿಗಳು ಈ ಅಣ್ಣ, ತಮ್ಮಂದಿರ (ಡಿ.ಕೆ.ಸಹೋದರರ) ಗುಲಾಮಗಿರಿ ಮಾಡುವುದಕ್ಕೂ ಒಂದು ಮಿತಿ ಬೇಡವೆ. ಕ್ಷೇತ್ರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನೋಡುತ್ತಿದ್ದೇನೆ. ಗುಲಾಮಗಿರಿ ಬಿಡಿ..’
– ಇದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಇಲ್ಲಿ ಅಧಿಕಾರಿಗಳಿಗೆ ನೀಡಿದ ಎಚ್ಚರಿಕೆ.
‘ನಾನು ದುರಹಂಕಾರದಲ್ಲಿ ಈ ಮಾತು ಹೇಳುತ್ತಿದ್ದೇನೆ ಅಂದುಕೊಂಡರೂ ಪರವಾಗಿಲ್ಲ. ನೀವೇನೂ ನನ್ನ ಕೈಗೆ ಸಿಕ್ಕಿ ಹಾಕಿಕೊಳ್ಳುವುದಿಲ್ಲವೇ? ಈಗ ನೀವು ಮಾಡುತ್ತಿರುವುದು ಮುಂದೆ ಪಶ್ಚಾತ್ತಾಪಕ್ಕೆ ಕಾರಣವಾಗಲಿದೆ‘ ಎಂದು ಅವರು ಸ್ಪಷ್ಟ ಹೇಳಿದರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟ ಭಾನುವಾರ ತಾಲ್ಲೂಕಿನ ಬೈರಾಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಡಿ.ಕೆ. ಸಹೋದರರು ಮತ್ತು ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ವಾಗ್ದಾಳಿ ನಡೆಸಿದರು.
‘ಅಧಿಕಾರಿಗಳು ಹೇಗೆ ನಡೆದುಕೊಳ್ಳುತ್ತಿದ್ದೀರಿ ಎಂದು ವಾರದಿಂದ ಗಮನಿಸುತ್ತಿದ್ದೇನೆ. ನಿಮ್ಮನ್ನು ಮೆಚ್ಚಿ ಮಾತನಾಡಬೇಕೇ ಅಥವಾ ಅವರು (ಡಿ.ಕೆ.ಸಹೋದರರು) ಬಯ್ಯುವಂತಹ ಪದಗಳನ್ನು ಬಳಸಬೇಕೇ? ನಾನು ನಾಳೆಯೇ ರಾಜಕೀಯಿಂದ ನಿವೃತ್ತಿ ಆಗುವುದಿಲ್ಲ. ರಾಜ್ಯದ ಪುಣ್ಯಾತ್ಮರು ನಮ್ಮನ್ನು ಉಳಿಸುತ್ತಾರೆ. ತಾನೊಂದು ಬಗೆದರೆ ದೈವ ಬೇರೊಂದು ಬಗೆಯುತ್ತದೆ. ಹಾಗಾಗಿ, ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ’ ಎಂದರು.
‘ನಾನು ಕೆಡಿಪಿ ಸಭೆ ಮಾಡಿದಾಗ ಮಾಧ್ಯಮದವರನ್ನು ಇರಿಸಿಕೊಂಡೇ ಮಾಡಿದೆ. ಇವರಂತೆ ಕದ್ದುಮುಚ್ಚಿ ಮಾಡಲಿಲ್ಲ. ಆದರೆ, ಇವರು ಅಧಿಕಾರಿಗಳ ಮೊಬೈಲ್ ಫೋನ್ ಎತ್ತಿಟ್ಟುಕೊಂಡು ಮೀಟಿಂಗ್ ಮಾಡುತ್ತಾರೆಂದರೆ ಏನೆನ್ನಬೇಕು? ಅಧಿಕಾರಿಗಳ ಗುಲಾಮಗಿರಿಗೂ ಮಿತಿ ಇರುತ್ತದೆ ಎಂಬುದನ್ನು ಮರೆಯಬಾರದು‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.