ಬಿಡದಿ: ಬನ್ನಿಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ ಮಾತನಾಡಿ, ‘ಭಾರತದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಕಾನೂನು 1986ರಲ್ಲಿ ಜಾರಿಗೆ ತರಲಾಯಿತು. 6 ರಿಂದ 14 ವಯಸ್ಸಿನ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಸಂವಿಧಾನ ಅವಕಾಶ ಮಾಡಿದೆ. 18 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರಣಕ್ಕೂ ಯಾವುದೇ ದುಡಿಮೆ ಕೆಲಸಕ್ಕೆ ತೊಡಗಿಸಬಾರದು’ ಎಂದು ತಿಳಿಸಿದರು.
ಬಾಲಕಾರ್ಮಿಕ ಪದ್ಧತಿಯು ಸಾಮಾಜಿಕ ಪಿಡುಗಾಗಿದೆ. ಇದನ್ನು ನಿರ್ಮೂಲನೆ ಮಾಡಲು ಸಂಘ-ಸಂಸ್ಥೆಗಳು, ಸಂಘಟನೆಗಳು ಹಾಗೂ ನಾವೆಲ್ಲರೂ ಸೇರಿ ಪ್ರಯತ್ನಿಸಬೇಕಿದೆ. ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು. ಮಕ್ಕಳು ಕಲಿಯುವ ಹಕ್ಕು ಯಾರು ಸಹ ಕಸಿಯಬಾರದು. ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಸಮಾಜ, ವ್ಯವಸ್ಥೆ, ನಿರಂತರ ಶ್ರಮಿಸಬೇಕಿದೆ ಎಂದು ತಿಳಿಸಿದರು.
ಶಾಲಾ ಮುಖ್ಯಶಿಕ್ಷಕ ಆರ್.ಬಿ ಗೌಡ ಮಾತನಾಡಿ, ಹಕ್ಕಿಪಿಕ್ಕಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಈಗಾಗಲೇ ವೈದ್ಯ ವೃತ್ತಿ, ಎಂಜಿನಿಯರಿಂಗ್ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಯಸ್ಸು ಮೀರಿ ನಂತರ ಶಾಲೆ ತೊರೆದಿದ್ದ ಸುಮಾರು 20 ಮಕ್ಕಳಿಗೆ ಕಲಿಕಾ ಕೇಂದ್ರ ತೆರೆದು ಆ ಮಕ್ಕಳಿಗೆ ಎಸ್ಎಸ್ಎಲ್ಸಿ ನೇರ ಪ್ರವೇಶ ಕಲ್ಪಿಸಿ ಉತ್ತೀರ್ಣರಾಗಲು ಅವಕಾಶ ನೀಡಲಾಯಿತು. ಆ ವಿದ್ಯಾರ್ಥಿಗಳು ಪ್ರಸ್ತುತ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಸತೀಶ್ ಗ್ರಾಮಸ್ಥರಾದ ಜೈಪು, ರಾಜೇಂದ್ರ ಪ್ರಸಾದ್ , ನಟರಾಜ , ರಾಜೇಂದ್ರ, ವಿದ್ಯಾರ್ಥಿಗಳಾದ ರಮ್ಯ, ಜೈ.ಕೃಷ್ಣ, ಅಪೂರ್ವರಾಜ್, ಶಿವಾನಿ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.