ರಾಮನಗರ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಸುರಿದ ಮಳೆರಾಯ ಬಿಸಿಲಿನಿಂದ ಬಳಲಿದ್ದ ಇಳೆಗೆ ತಂಪನ್ನೆರೆದ. ಗುಡುಗು, ಭಾರಿ ಗಾಳಿ ಹಾಗೂ ಸಿಡಿಲಿನೊಂದಿಗೆ ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ, ಮಾಗಡಿ ಹಾಗೂ ಕನಕಪುರ ತಾಲ್ಲೂಕಿನ ವಿವಿಧೆಡೆ ಮಳೆಯಾಗಿದೆ. ಕೆಲವೆಡೆ ತುಂತುರು ಮಳೆಯಾದರೆ, ಉಳಿದೆಡೆ ಸಾಧಾರಣವಾಗಿ ಸುರಿದಿದೆ.
ರಾಮನಗರ ಹೊರಲವಯದ ಜಾನಪದ ಲೋಕದಲ್ಲಿರುವ ಗಿರಿಜನ ಲೋಕದಲ್ಲಿ ನಿರ್ಮಿಸಿರುವ ಮಲೆ ಕುಡಿಯರ ಮನೆ (ಹಾಡಿ) ಸಿಡಿಲು ಬಡಿದಿದ್ದರಿಂದ ಹೊತ್ತಿ ಉರಿದಿದೆ. ಮಧ್ಯಾಹ್ನ 3.40ರ ಸುಮಾರಿಗೆ ಭಾರೀ ಗುಡುಗಿನೊಂದಿಗೆ ಸಿಡಿಲು ಬಡಿದಿದ್ದರಿಂದ, ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ್ದಾರೆ.
ಎರಡು ವಾಹನಗಳಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ಅರ್ಧ ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಷ್ಟೊತ್ತಿಗಾಗಲೇ ಮನೆಯ ಚಾವಣಿಗೆ ಹೊದಿಸಿರುವ ಹುಲ್ಲು, ಮರದ ಕಂಬಗಳು ಕಿಟಕಿ, ಆಟಿಕೆಗಳು ಸೇರಿದಂತೆ ಮನೆಯೊಳಗಿದ್ದ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಜಾನಪದ ಲೋಕದ ಅಧಿಕಾರಿಯೊಬ್ಬರು ತಿಳಿಸಿದರು.
ಗಾಳಿಯ ಅಬ್ಬರಕ್ಕೆ ತಾಲ್ಲೂಕಿನ ವಿವಿಧೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿವೆ. ಕೆಲವೆಡೆ ಮನೆಗಳಿಗೆ ಅಳವಡಿಸಿದ್ದ ಶೀಟ್ಗಳು ಹಾಗೂ ಪ್ಲಾಸ್ಟಿಕ್ಗಳು ಹಾರಿ ಹೋಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.