ಚನ್ನಪಟ್ಟಣ: ಕೆಂಗಲ್ ಹನುಮಂತಯ್ಯ ಅವರು ದೇಶ ಕಂಡ ಅಪರೂಪದ ರಾಜಕಾರಣಿ. ರಾಜಕಾರಣಿಯಷ್ಟೇ ಅಲ್ಲ ಅವರೊಬ್ಬ ಸಾಹಿತ್ಯ ಹಾಗೂ ಸಂಗೀತ ಪ್ರೇಮಿಯಾಗಿದ್ದರು ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಹೇಳಿದರು.
ತಾಲ್ಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿಯ ಸಾಹಿತ್ಯ ಕುಟೀರದಲ್ಲಿ ಜೈ ಹಿಂದೂಸ್ತಾನ್ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕೆಂಗಲ್ ಹನುಮಂತಯ್ಯ ಸಂಸ್ಮರಣೆ, ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಅವರು ನೀಡಿದ ಕೊಡುಗೆಗಳು ಅಪಾರ. ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ಕೊಟ್ಟ ನಾಯಕ ಅವರು. ಭವ್ಯವಾದ ವಿಧಾನಸೌಧ ನಿರ್ಮಾಣ ಮಾಡುವ ಮೂಲಕ ರಾಜ್ಯದ ಕೀರ್ತಿಯನ್ನು ಬೆಳಗಿಸಿದವರು. ಅಪಾರವಾದ ದೂರದೃಷ್ಟಿ ಹೊಂದಿದ್ದ ಅವರು, ಇಡೀ ವಿಶ್ವವೇ ಮೆಚ್ಚುವ ಆಡಳಿತ ಸೌಧವನ್ನು ನಿರ್ಮಾಣ ಮಾಡಿದರು ಎಂದರು.
ಡಾ. ಭಗತ್ ರಾಂ ಮಾತನಾಡಿ, ಧೀಮಂತ ರಾಜಕಾರಣಿ ಕೆಂಗಲ್ ಹನುಮಂತಯ್ಯ ಅವರು ನಮ್ಮ ಜಿಲ್ಲೆಯವರು ಎಂಬುದೇ ನಮಗೆ ಹೆಮ್ಮೆಯ ವಿಚಾರ. ಕರ್ನಾಟಕ ಏಕೀಕರಣ ಹಾಗೂ ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾದದ್ದು. ಅವರ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಅವಶ್ಯಕ ಎಂದರು.
ಪ್ರಗತಿಪರ ರೇಷ್ಮೆ ಕೃಷಿಕ ರಮೇಶ್ ಹೆಗ್ಗಡೆ, ತಾಲ್ಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ತಿಟ್ಟಮಾರನಹಳ್ಳಿ, ಟ್ರಸ್ಟ್ ಕಾರ್ಯದರ್ಶಿ ಮಂಜೇಶ್ ಬಾಬು ಇತರರು ಭಾಗವಹಿಸಿದ್ದರು.
ಅಂಧರ ಶಾಲೆಯ ನಿವೃತ್ತ ಸಂಗೀತ ಶಿಕ್ಷಕ ಅಪ್ಪಾಜಿ ಅವರನ್ನು ಸನ್ಮಾನಿಸಲಾಯಿತು. ಯಲಿಯೂರು ರಾಜು, ಮತ್ತೀಕೆರೆ ಚೆಲುವರಾಜು, ದೇ. ನಾರಾಯಣಸ್ವಾಮಿ, ಮೇದರದೊಡ್ಡಿ ಹನುಮಂತು, ಸೀಬನಹಳ್ಳಿ ಪಿ. ಸ್ವಾಮಿ, ಕಿರಣ್ ರಾಜ್ ತುಂಬೇನಹಳ್ಳಿ ಕವನ ವಾಚನ ಮಾಡಿದರು. ಗೋವಿಂದಹಳ್ಳಿ ಶಿವಣ್ಣ ಹಾಡಿದರು. ಶಂಕರ್ ಬಾಬು ಮಿಮಿಕ್ರಿ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.