ಕುದೂರು: ಗ್ಯಾರಂಟಿ ಯೋಜನೆಗಳ ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಸಹ ಕೈಗೆತ್ತಿಕೊಂಡು ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಪಟ್ಟಣದ ರಾಮಲೀಲಾ ಮೈದಾನವನ್ನು ಸುಸಜ್ಜಿತ ಒಳಾಂಗಣ ಕ್ರೀಡಾಂಗಣವನ್ನಾಗಿ ರೂಪಿಸುವ ಕಾರ್ಯಕ್ರಮಕ್ಕೆ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಕುದೂರಿಗೆ ₹ 4 ಕೋಟಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಕೆಎಸ್ಆರ್ಟಿಸಿ ಬಸ್ ಡಿಪೋ, ಬಸ್ ನಿಲ್ದಾಣ ಕೂಡ ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ. ಪರೀಕ್ಷೆ ಮುಗಿದ ನಂತರ ರಜಾವಧಿಯಲ್ಲಿ ಪಟ್ಟಣದ ಕೆಪಿಎಸ್ ಶಾಲೆಯ ಕೊಠಡಿಗಳನ್ನು ತೆರವುಗೊಳಿಸಿ ಟೊಯೋಟೊ ಸಂಸ್ಥೆಯ ಸಿಎಸ್ಆರ್ ಅನುದಾನದಲ್ಲಿ ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು.
ಶಾಸಕ ಎಚ್.ಸಿ. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ರವಿ, ಮಣ್ಣಿಗನಹಳ್ಳಿ ಸುರೇಶ್, ಮಾಗಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ಗೌಡ, ಕುದೂರು ಗ್ರಾ.ಪಂ. ಉಪಾಧ್ಯಕ್ಷೆ ರಮ್ಯಾ ಜ್ಯೋತಿ, ಮಾಜಿ ಅಧ್ಯಕ್ಷೆ ಭಾಗ್ಯಮ್ಮ ಚಿಕ್ಕರಾಜು, ಸದಸ್ಯರಾದ ಕೆ.ಬಿ.ಬಾಲರಾಜು, ಹನುಮಂತರಾಯಪ್ಪ, ಜಯರಾಮ್, ನಿರ್ಮಲಾ, ಇಂದು ಲೋಕೇಶ್, ಮುಖಂಡರಾದ ಯತೀಶ್, ಕೆ.ಬಿ ಚಂದ್ರಶೇಖರ್, ಹಾಪ್ ಕಾಮ್ಸ್ ಮಾಜಿ ನಿರ್ದೇಶಕ ಮಂಜೇಶ್ ಕುಮಾರ್ ಇನ್ನಿತರರು ಇದ್ದರು.
ನೀರು ಬೇಕಾದರೆ ಸಂಸದರಿಗೆ ಮತ ಹಾಕಿ!
ತುಮಕೂರಿನ ಕೆಡಿಪಿ ಸಭೆಯಲ್ಲಿ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರನ್ನು ಹರಿಸದಿರಲು ತೆಗೆದುಕೊಂಡ ನಿರ್ಧಾರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಬಾಲಕೃಷ್ಣ, ಅದೆಲ್ಲ ಚರ್ಚೆ ಮಾಡುವುದು ಬೇಕಾಗಿಲ್ಲ, ನಮ್ಮ ನೀರು ನಮಗೆ ಬರುತ್ತದೆ. ನಿಮಗೆ ನೀರು ಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರಿಗೆ ಮತ ಹಾಕಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.