ರಾಮನಗರ: ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಆರ್.ಟಿ.ಒ ಕಚೇರಿ ಮೇಲೆ ಜಿಲ್ಲೆಯ ಲೋಕಾಯುಕ್ತ ಪೊಲೀಸರ ತಂಡ ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಿದೆ.
ನಕಲಿ ದಾಖಲೆ ಸೃಷ್ಟಿಸಿ ಹಳೆ ಹಾಗೂ ಜಪ್ತಿಯಾದ ಟ್ರಾಕ್ಟರ್ ಗಳ ನೋಂದಣಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ, ಇದೇ ಕಚೇರಿ ಮೇಲೆ ಮೂರು ತಿಂಗಳ ಹಿಂದೆಯಷ್ಟೇ ದಾಳಿ ನಡೆದಿತ್ತು. ಆರ್.ಟಿ.ಒ ಶಿವಕುಮಾರ್ ಹಾಗೂ ದಲ್ಲಾಳಿ ಟ್ರಾಕ್ಟರ್ ಸತೀಶ್ ಎಂಬಾತನನ್ನು ಪೊಲೀಸರು ಬಂಧಿಸಿದರು.
ಹಳೆ ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ, ಕಚೇರಿಯಲ್ಲಿ ಮತ್ತೆ ನಕಲಿ ದಾಖಲೆ ಮೇರೆಗೆ ವಾಹನಗಳ ನೋಂದಣಿ ಹಾಗೂ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳು ಬಂದಿದ್ದವು. ಹಾಗಾಗಿ, ಮತ್ತೆ ದಾಳಿ ನಡೆಸಿ ಕಚೇರಿ ಒಳಗೆ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಚೇರಿ ಆವರಣದಲ್ಲಿ ಇದ್ದವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.