ರಾಮನಗರ: ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಮಾಡುವ ಖರ್ಚು– ವೆಚ್ಚದ ಮೇಲೆ ನಿಗಾ ಇಡಬೇಕು’ ಎಂದು ಚುನಾವಣಾ ವೆಚ್ಚ ವೀಕ್ಷಕರಾದ ಬಿ. ಜಯರಾಘವನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಲೆಕ್ಕ ಪರಿವೀಕ್ಷಕರು ಮತ್ತು ಲೆಕ್ಕಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಅಭ್ಯರ್ಥಿಗಳ ಖರ್ಚಿನ ಬಗ್ಗೆ ನಿತ್ಯ ನಿಗಾ ವಹಿಸಬೇಕು. ಸಭೆ, ಸಮಾರಂಭ, ವಾಹನಗಳ ತಪಾಸಣೆ, ಬ್ಯಾಂಕ್ ವಹಿವಾಟು ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದರು.
‘ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ಎಫ್.ಎಸ್.ಟಿ, ಎಸ್.ಎಸ್.ಟಿ, ವಿ.ವಿ.ಟಿ ಹಾಗೂ ಇನ್ನಿತರ ತಂಡಗಳನ್ನು ಸಂಪರ್ಕಿಸಿ ಅಭ್ಯರ್ಥಿಯ ಚುನಾವಣಾ ವೆಚ್ಚದ ವಿವರಗಳನ್ನು ಪಡೆಯಬೇಕು. ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಅಭ್ಯರ್ಥಿಯ ಖಾತೆಯನ್ನು ಪರಿಶೀಲನೆ ಮಾಡಬೇಕು’ ಎಂದು ಸೂಚಿಸಿದರು.
‘ಒಬ್ಬ ವ್ಯಕ್ತಿ ಅನೇಕ ಬ್ಯಾಂಕ್ ಖಾತೆಗಳಿಗೆ ಹಣ ತುಂಬುವುದು, ಅತಿ ಹೆಚ್ಚು ಬ್ಯಾಂಕ್ ವಹಿವಾಟು ನಡೆಸುವ ವ್ಯಕ್ತಿ ಮತ್ತು ಬ್ಯಾಂಕ್ನಲ್ಲಿ ಅನೇಕ ಬಾರಿ ಹಣ ಡ್ರಾ ಮಾಡುವವರ ಮೇಲೆ ನಿಗಾ ವಹಿಸಬೇಕು. ಅಭ್ಯರ್ಥಿಯು ಏರ್ಪಡಿಸುವ ಸಭೆ ಮತ್ತು ಸಮಾರಂಭಗಳ ವೆಚ್ಚವನ್ನು ಪರಿಶೀಲಿಸಬೇಕು. ಸಿ-ವಿಜಿಲ್ ಮೂಲಕ ದಾಖಲಾಗುವ ಪ್ರಕರಣಗಳ ಬಗ್ಗೆ ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.
ವೆಚ್ಚ ವೀಕ್ಷಕರಾದ ಜೀತೇಂದ್ರ ಸಿಂಗ್, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ರಾಧಾ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.