ಮಾಗಡಿ: ಸಮಗ್ರ ಕೃಷಿ ಮೂಲಕ ರೈತರು ಆರ್ಥಿಕ ಸುಸ್ಥಿರತೆ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಮಾರೇಗೌಡ ತಿಳಿಸಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೃಷಿಕ ಸಮಾಜದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಮುಂಗಾರು ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಚುರುಕುಗೊಂಡಿದೆ. ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ಇಲಾಖೆ ಪೂರೈಕೆ ಮಾಡುತ್ತಿದೆ. ರೈತರು ಅಗತ್ಯ ದಾಖಲೆಗಳನ್ನು ಇಲಾಖೆಗೆ ಒದಗಿಸುವ ಮೂಲಕ ಸೌಲತ್ತುಗಳನ್ನು ಪಡೆದುಕೊಳ್ಳಬೇಕು. ಕೃಷಿಕ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಸಹ ತಮ್ಮಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೈತಬಾಂಧವರಿಗೆ ಇಲಾಖೆಯ ಸೌಲತ್ತುಗಳನ್ನು ತಿಳಿಸುವ ಮೂಲಕ ಜಾಗೃತಿಗೊಳಿಸಬೇಕಿದೆ ಎಂದರು.
ಕೃಷಿ ಇಲಾಖೆಯಲ್ಲಿ ಸುಮಾರು 26 ಹುದ್ದೆಗಳು ಖಾಲಿಯದ್ದು, ಸಂಬಂಧಪಟ್ಟ ಸಚಿವರು ಕೂಡಲೆ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕೆಂದು ಕೃಷಿಕ ಸಮಾಜ ಒತ್ತಾಯಿಸಿದೆ ಎಂದರು.
ಶೈಕ್ಷಣಿಕ ಪ್ರವಾಸ: ಕೃಷಿಕ ಸಮಾಜದ ಅಧ್ಯಕ್ಷ, ಕಾರ್ಯದರ್ಶಿ, ನಿರ್ದೇಶಕರು ಹಾಗೂ ಅಧಿಕಾರಿಗಳು ಸೇರಿ ಸಮಗ್ರ ಕೃಷಿ ಅಧ್ಯಯನಕ್ಕೆ ಪ್ರವಾಸ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಉಮೇಶ್ ತಿಳಿಸಿದರು.
ಸಾಮಾಜಿಕ ಅರಣ್ಯಾಧಿಕಾರಿ ಕೆ.ಟಿ.ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕಿ ವಿಜಯಾ ಸವಣೂರು,
ಕೆವಿಕೆ ಮುಖ್ಯಸ್ಥೆ ಲತಾ ಕುಲಕರ್ಣಿ ಮಾತನಾಡಿದರು.
ತೋಟಗಾರಿಕೆ ಅಧಿಕಾರಿ ಪ್ರಕಾಶ್, ರೇಷ್ಮೆ, ಪಶುಸಂಗೋಪನೆ ಇಲಾಖೆ ಅಧಿಕಾರಿ ಚಿಕ್ಕಹನುಮಯ್ಯ ಇವರು ಇಲಾಖೆಯ ಸೌಲತ್ತುಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಕೃಷಿ ತಾಂತ್ರಿಕ ಅಧಿಕಾರಿ ಎಂ. ಮಹೇಶ್ ವಾರ್ಷಿಕ ವರದಿ ಮಂಡಿಸಿದರು. ಕೃಷಿಕ ಸಮಾಜದ ನಿರ್ದೇಶಕರಾದ ಗೋವಿಂದರಾಜು, ರಂಗಸ್ವಾಮಯ್ಯ, ಬಸವನಪಾಳ್ಯದ ಲೋಕೇಶ್, ದೇವರಾಜು, ಅರುಣ್, ಅಜಯ್, ರವಿ, ಟಿ.ಎಂ.ಶ್ರೀನಿವಾಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.