ಮಾಗಡಿ:ಇಲ್ಲಿನ ನಾಯಕನ ಪಾಳ್ಯಗೇಟ್ ಬಳಿ ಮುತ್ತಯ್ಯಸ್ವಾಮಿ ದೇವಸ್ಥಾನ ಸಮೀಪ ₹ 60 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಎಚ್.ಸಿ.ಬಾಲಕೃಷ್ಣ ಬುಧವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಶುಭ ಸಮಾರಂಭಗಳನ್ನು ಕಡಿಮೆ ವೆಚ್ಚದಲ್ಲಿ ಮಾಡುವ ನಿಟ್ಟಿನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ನೀಡಿದ ಅನುದಾನ ಅಡಿಯಲ್ಲಿ ಭವನ ನಿರ್ಮಿಸಲಾಗುತ್ತಿದೆ. ನಾಯಕನ ಪಾಳ್ಯಗೇಟ್ ಬಳಿ ಇರುವ ದಳವಾಯಿ ಕೆರೆಗೆ ಅಭಿವೃದ್ಧಿಗೆ ₹ 2ಕೋಟಿ ಅನುದಾನ ನೀಡಲಾಗಿದೆ. ವರ್ಷದ 365 ದಿನವೂ ನೀರು ಉಳಿಯುವ ರೀತಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದರು.
ವೀರೇಗೌಡನ ದೊಡ್ಡಿಯಿಂದ ಮಂಚನಬೆಲೆ ವರೆಗೂ ರಸ್ತೆ ಅಭಿವೃದ್ಧಿಗೆ ₹8 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎಂದರು.
ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ವಿಚಾರವಾಗಿ ಈಗ ಗೆದ್ದಿರುವ ಸಂಸದರು ಆ ಭಾಗದ ಜನಗಳ ಮನವೊಲಿಸಿ ಕಾಮಗಾರಿ ಆರಂಭಿಸಬೇಕು. ಮಾಗಡಿ ತಾಲೂಕಿನಲ್ಲಿ 29 ಸಾವಿರ ಹೆಚ್ಚುವರಿ ಮತಗಳು ಬಿದ್ದಿದ್ದು ಅವರೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಿ ಕೆನಾಲ್ ಮುಂದುವರಿಸಲು ಕ್ರಮ ವಹಿಸಬೇಕು ಎಂದು ಬಾಲಕೃಷ್ಣ ಹೇಳಿದರು.
ಪೂಜಾರಿ ಪಾಳ್ಯ ಕೆ. ಕೃಷ್ಣಮೂರ್ತಿ, ಗ್ರಾ.ಪಂ.ಸದಸ್ಯ ರಂಗನಾಥ್, ಮುಖಂಡರಾದ ಕೃಷ್ಣಪ್ಪ, ಪಂಚಾಕ್ಷರಿ, ಹನುಮಂತರಾಜು, ರಾಮಣ್ಣ ಗುಡ್ಡಹಳ್ಳಿ ರವಿ, ದೊಡ್ಡಿ ವಿಶ್ವನಾಥ್, ರಂಗಸ್ವಾಮಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.