ಹಾರೋಹಳ್ಳಿ: ಹಾರೋಹಳ್ಳಿಯನ್ನು ವಿಶೇಷವಾಗಿ ಅಭಿವೃದ್ಧಿ ಮಾಡಲಾಗುವುದು. 25 ವರ್ಷದಿಂದ ಇಲ್ಲಿ ಜನಪ್ರತಿನಿಧಿಯಾಗಿದ್ದವರು ಕೆಲಸ ಮಾಡಿಲ್ಲ ಎಂದು ಸಂಸದ ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದರು.
ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಭಾನುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಲವೇ ದಿನಗಳಲ್ಲಿ ಹಾರೋಹಳ್ಳಿ ಪುರಸಭೆಯಾಗಿ ಘೋಷಣೆ ಮಾಡಲಾಗುವುದು ಎಂದರು.
ಮೆಟ್ರೊ: ಹಾರೋಹಳ್ಳಿವರೆಗೂ ಮೆಟ್ರೊ ಡಿಪಿಆರ್ ತಯಾರಾಗಿದೆ. ಹಾರೋಹಳ್ಳಿ ಪಟ್ಟಣಕ್ಕೇ ಕಾವೇರಿ ನೀರು ನೀಡುವ ಆದೇಶ ಹೊರಡಿಸಲಾಗಿದೆ. ಜತೆಗೆ ತಾಲ್ಲೂಕಿನ 270 ಹಳ್ಳಿಗಳಿಗೆ ₹300 ಕೋಟಿ ಅನುದಾನ ನೀಡಿ ಕಾವೇರಿ ನೀರು ತರುವ ಕೆಲಸ ಮಾಡಲಾಗುವುದು ಎಂದರು.
ಹಾರೋಹಳ್ಳಿ– ಅನೇಕಲ್ ಮುಖ್ಯ ರಸ್ತೆ ಮಂಜೂರು ಮಾಡಿಸಲಾಗಿದೆ. ಹಾರೋಹಳ್ಳಿ 1ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ 207 ಆಸ್ತಿ ವಶಪಡಿಸಿಕೊಳ್ಳಲು ₹10ಕೋಟಿ ಹಣ ಮೀಸಲು ಇಡಲಾಗಿದೆ ಎಂದರು.
ಬಡವರಿಗೆ ನಿವೇಶನ: ಬಡವರಿಗೆ ನಿವೇಶನ ಕೊಡಲು 30 ಎಕರೆ ಗುರುತಿಸಲಾಗಿದೆ. 2 ತಿಂಗಳಲ್ಲಿ 1 ಸಾವಿರ ನಿವೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಜನರ ಕಷ್ಟ–ಸುಖ ಸುಲಭವಾಗಿ ನೀಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬಡವರಿಗೆ ಸೂರು, ವಿದ್ಯುತ್, ಉದ್ಯಾನ ಒದಗಿಸಲಾಗುವುದು ಎಂದರು.
ತಹಶೀಲ್ದಾರ್ ವಿಜಿಯಣ್ಣ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಟರಾಜ್, ಮಾಜಿ ಶಾಸಕ ರಾಜು, ವಿಶ್ವನಾಥ್, ಮೋಹನ್ ಹೊಳ್ಳ, ಸಬ್ದರು, ಹರೀಶ್ ಕುಮಾರ್, ಈಶ್ವರ್, ಕಿರಣಗೆರೆ ಜಗದೀಶ್, ಅಶೋಕ್ ರಮೇಶ್, ಶೇಖರ್, ಸುರೇಶ್, ಕೋಟೆ ಕುಮಾರ್, ರುದ್ರೇಶ್, ಶಿವರಾಜು ನವೀನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.