ಕುದೂರು: ತಿಮ್ಮೇಗೌಡನಪಾಳ್ಯದಲ್ಲಿ ಜ.28 ರಂದು ನಡೆದ ಅಶೋಕ್ ಎಂಬ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಿಮ್ಮೇಗೌಡನಪಾಳ್ಯದ ಮಂಜುನಾಥ್ ಬಾಬು ಅವರ ಫಾರ್ಮ್ಹೌಸ್ನಲ್ಲಿ ಹುಟ್ಟುಹಬ್ಬ ಆಚರಣೆಯ ವೇಳೆ ಗಲಾಟೆಯಾಗಿ, ಅಶೋಕ ಎಂಬಾತನನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಶಿವಕುಮಾರ್, ನಾಗೇಶ್, ಮಾರುತಿ, ಶೋಭಿತ್, ದಿಲೀಪ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಮಾಹಿತಿ ನೀಡಿದರು.
ಗೊರಗುಂಟೆಪಾಳ್ಯದ ದಿಲೀಪ್ ಹುಟ್ಟುಹಬ್ಬದ ಆಚರಣೆಗೆ ಬೆಂಗಳೂರಿನಿಂದ ತಿಮ್ಮೇಗೌಡನಪಾಳ್ಯಕ್ಕೆ ಸುಮಾರು 20-25 ಮಂದಿ ಸ್ನೇಹಿತರು ಸೇರಿದ್ದರು. ಪಾರ್ಟಿಯಲ್ಲಿ ಶಿವಕುಮಾರ್ ಮತ್ತು ಅಶೋಕ್ ನಡುವೆ ಗಲಾಟೆ ನಡೆದಿತ್ತು. ಆ ವೇಳೆ ದಿಲೀಪ್ ಇಬ್ಬರಿಗೂ ಬುದ್ಧಿ ಹೇಳಿ ಜಗಳ ಬಿಡಿಸಿದ್ದರು.
ಪಾರ್ಟಿ ಮುಗಿದ ನಂತರ ದಿಲೀಪ್, ಶೋಭಿತ್, ಅಶೋಕ್ ಮೂವರು ಕಾರಿನಲ್ಲಿ ಹೊರಟಾಗ ಕಾರನ್ನು ಅಡ್ಡಗಟ್ಟಿದ ಶಿವಕುಮಾರ್ ಮತ್ತು ಅವರ ತಂಡ ಅಶೋಕನನ್ನು ಅಟ್ಟಾಡಿಸಿಕೊಂಡು ನೀಲಗಿರಿ ತೋಪಿನ ಬಳಿ ಕೊಲೆ ಮಾಡಿ ಪರಾರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.