ADVERTISEMENT

ರಾಮನಗರ | ಆಸ್ತಿ ಜಗಳ: ಅಣ್ಣನ ಕೊಲೆಗೈದ ತಮ್ಮ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 5:11 IST
Last Updated 5 ಏಪ್ರಿಲ್ 2024, 5:11 IST

‌ರಾಮನಗರ: ಆಸ್ತಿ ವಿಷಯಕ್ಕಾಗಿ ಸಹೋದರರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.ತಾಲ್ಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮದಲ್ಲಿ ಆಸ್ತಿಗಾಗಿ ತಮ್ಮನೊಬ್ಬ ತನ್ನ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ. ಬೀರಯ್ಯ (52) ಕೊಲೆಯಾಗಿದ್ದು, ಆರೋಪಿ ರೇಣುಕಯ್ಯನನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಮೀನಿನ ಬಳಿ ಅಣ್ಣ–ತಮ್ಮ ಇಬ್ಬರಿಗೂ ಜಗಳವಾಗಿತ್ತು. ಈ ವೇಳೆ ರೇಣುಕಯ್ಯ ತನ್ನ ಅಣ್ಣನ ಕುತ್ತಿಗೆನ್ನು ಟವೆಲ್‌ನಿಂದ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಹಳ್ಳದವರೆಗೆ ಎಳೆದೊಯ್ದು, ಬೆಂಕಿ ಹಾಕಿ ಸುಟ್ಟು ಹಾಕಲು ಯತ್ನಿಸಿ ಪರಾರಿಯಾಗಿದ್ದಾನೆ. ರಾತ್ರಿಯಾದರೂ ಮನೆಗೆ ಬಾರದ ಬೀರಯ್ಯನನ್ನು ಕುಟುಂಬದವರು ಹುಡುಕಾಡಿದ್ದಾರೆ.

ಬೆಳಿಗ್ಗೆ ಹಳ್ಳದ ಬಳಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಶವವನ್ನು ನೋಡಿದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಬೀರಯ್ಯ ಎಂಬುದು ಗೊತ್ತಾಯಿತು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿ, ಕೊಲೆಯ ಜಾಡು ಹಿಡಿದು ತನಿಖೆ ನಡೆಸಿದಾಗ ತಮ್ಮನೇ ಕೊಲೆಗಾರ ಎಂಬುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದರು.

ADVERTISEMENT

ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಇನ್‌ಸ್ಪೆಕ್ಟರ್ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಗ್ರಾಮದಲ್ಲಿ ಬೀರಯ್ಯ ಅಂತ್ಯಕ್ರಿಯೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.