ರಾಮನಗರ: ದೃಶ್ಯ ಮಾಧ್ಯಮದ ವ್ಯಾಮೋಹ ಹಾಗೂ ಧಾರಾವಾಹಿಗಳಿಗೆ ಜನರು ಹೆಚ್ಚು ಒತ್ತು ಕೊಡುತ್ತಿದ್ದು, ಪೌರಾಣಿಕ ನಾಟಕಗಳು ನಶಿಸುತ್ತಾ ಬಂದಿದೆ ಎಂದು ಮಂಡ್ಯ ಜಿಲ್ಲೆಯ ರಂಗ ನಿರ್ದೇಶಕ, ಹರಿಕಥೆ ವಿದ್ವಾಂಸ ವಿ.ಸಿ. ಗೋವಿಂದರಾಜು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ‘ರಂಗ ಕಲಾಭೂಷಣ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.
ನಾಟಕ ಕಲೆ ಅದರಲ್ಲೂ ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸಿದಾಗ ಮನುಷ್ಯನ ಮನಸಿನ ಪರಿವರ್ತನೆ ಸಾಧ್ಯ. ಆಧುನಿಕ ಯುಗದಲ್ಲಿ ಕಲೆ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಪೌರಾಣಿಕ ನಾಟಕಗಳನ್ನು ಏರ್ಪಡಿಸುವ ಮೂಲಕ ಕಲೆಯನ್ನು ಪೋಷಿಸುವ ಕೆಲಸ ಮಾಡಬೇಕು ಎಂದರು.
ಶಾಂತಲಾ ಚಾರಿಟಬಲ್ ಟ್ರಸ್ಟಿನ ಕಾರ್ಯದರ್ಶಿ ಕವಿತಾ ರಾವ್ ಮಾತನಾಡಿ, ಟ್ರಸ್ಟ್ ಮೂಲಕ ಕಳೆದ 20 ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ತಿಂಗಳ ಕಲಾ ಬೆಳಕು ಕಾರ್ಯಕ್ರಮದ ಮೂಲಕ ಕಲಾವಿದರನ್ನು ಗುರುತಿಸುವ ಜೊತೆಗೆ ಅವರಿಗೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಕಲಾ ಬಳಗದ ಗೌರವಾಧ್ಯಕ್ಷ ಶಂಭೂ ಗೌಡ, ರಂಗಭೂಮಿ ಕಲಾವಿದರಾದ ಅಬ್ದುಲ್ ಸಮದ್, ಸಂಪತ್ ಕುಮಾರ್, ಆದರ್ಶ ಸಿಂ.ಲಿಂ. ನಾಗರಾಜು, ತಬಲ ವಾದಕ ಮಹದೇವಚಾರ್, ಶಿಕ್ಷಕ ರಾಜಶೇಖರ್, ಗಾಯಕ ಮಹದೇವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.