ಮಾಗಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ರೋಟರಿ ಮಾಗಡಿ ಸೆಂಟ್ರಲ್ ಸಹಯೋಗದಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಮತ್ತು ಏಡ್ಸ್ ಜಾಗೃತಿ ಶಿಬಿರ ನಡೆಯಿತು.
ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ಗಿರಿರಾಜು.ಜಿ.ವೈ.ಮಾತನಾಡಿ, ಒಂದು ವರ್ಷದಲ್ಲಿ ಕನಿಷ್ಠ 1.60 ಲಕ್ಷ ಅಪಘಾತದಿಂದ ಸಾಯುತ್ತಿದ್ದಾರೆ. 5 ಲಕ್ಷ ಜನ ಗಾಯಾಗೊಳ್ಳುತ್ತಿದ್ದಾರೆ ಎಂದು ವರದಿ ಬಂದಿದೆ. ಎಚ್ಐವಿ, ಏಡ್ಸ್ ರೋಗಗಳಿಂದ ಸಾಯುವವರಿಗಿಂತ ಅಧಿಕ ಮಂದಿ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡು ಬಂದರೆ ಮಕ್ಕಳು ಮತ್ತು ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಜತೆಗೆ ಬೈಕ್ನಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸಬಾರದು. ವಾಹನ ಚಾಲಕರ ನಿರ್ಲಕ್ಷ್ಯವೇ ಅಪಘಾತಗಳಿಗೆ ಕಾರಣ. ರಸ್ತೆ ಬದಿ ಸೂಚನಾ ಫಲಕಗಳನ್ನು ಗಮನಿಸಿ ನಿಧಾನವಾಗಿ ವಾಹನ ಚಲಾಯಿಸಿ. ಜೀವ ಮತ್ತು ಜೀವನ ಅಮೂಲ್ಯವಾದುದು ಎಂಬುದನ್ನು ಮರೆಯಬಾರದು ಎಂದರು.
ಲೈಸನ್ಸ್ ಇಲ್ಲದ ಮತ್ತು ವಿಲ್ಹೀಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಲಾ ಕಾಲೇಜು ಸಮಯದಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದೇವೆ. ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ತಪ್ಪದು ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಅಪರಿಚಿತರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಎಚ್ಐವಿ ಹರಡುತ್ತದೆ. ಕಾಲೇಜು ವಿದ್ಯಾರ್ಥಿಗಳು ದುಷ್ಚಚಟಗಳಿಂದ ದೂರವಿದ್ದು, ಓದಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದರು.
ಸರ್ಕಾರಿ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಮಂಜುಳಾ ದಂತಪಂಕ್ತಿ ಸುರಕ್ಷತೆ ಕುರಿತು ಮಾತನಾಡಿದರು. ದಂತವೈದ್ಯ ವಿಶ್ವನಾಥ್ ಬಣಗಾರ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರ್.ರಂಗನಾಥ್, ವರುಣ್ ದಾಬೋಜಿ, ರೋಟರಿ ಅಧ್ಯಕ್ಷ ಪ್ರಭಾಕರ್.ಎಲ್, ರೊಟೇರಿಯನ್ಗಳಾದ ನರಸಿಂಹ ಪ್ರಸಾದ್, ನರಸಿಂಹಮೂರ್ತಿ ಮೆಡಿಕಲ್ ಅಶ್ವತ್ಥ್, ಎನ್.ಎಸ್.ಎಸ್ ಅಧಿಕಾರಿ ಶಿವಲಿಂಗೇಗೌಡ, ವಿದ್ಯಾರ್ಥಿನಿ ನಿತಿನ್ ಮಾತನಾಡಿದರು.
ಪ್ರೊ.ರಮೇಶ್, ಕಾಲೇಜಿನ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.