ADVERTISEMENT

ಕುದೂರು: ಮಳೆಗಾಗಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 7 ಮೇ 2024, 6:42 IST
Last Updated 7 ಮೇ 2024, 6:42 IST
ಕುದೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಮಳೆಗಾಗಿ ಮಳೆರಾಯನ ಮೆರವಣಿಗೆ ನಡೆಯಿತು.
ಕುದೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಮಳೆಗಾಗಿ ಮಳೆರಾಯನ ಮೆರವಣಿಗೆ ನಡೆಯಿತು.   

ಕುದೂರು: ಪಟ್ಟಣದಲ್ಲಿ ಸೋಮವಾರ ಮಳೆಗಾಗಿ ಮಳೆರಾಯನನ್ನು ಮೆರವಣಿಗೆ ಮಾಡಿ ಪೂಜೆ ಮಾಡಲಾಯಿತು.

‘ಬಾರೋ ಬಾರೋ ಮಳೆರಾಯ ಬಾಳೆ ತೋಟಕೆ ನೀರಿಲ್ಲ.... ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ...’ ಎಂದು ಹಾಡುತ್ತಾ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಳೆಗಾಗಿ ಜನರು ಪ್ರಾರ್ಥಿಸಿದರು.

ಪಟ್ಟಣದಲ್ಲಿ ಮಳೆರಾಯನ ಮೆರವಣಿಗೆ ಮಾಡುತ್ತಿದ್ದಾಗ ಕಾಕತಾಳೀಯವೆಂಬಂತೆ ಮೋಡ ಮುಸುಕಿದ ವಾತಾವರಣ ಕಂಡುಬಂದಿತು.

ADVERTISEMENT

ಮಳೆರಾಯನ ಆಚರಣೆಯ ಹಿನ್ನೆಲೆ: ಜನರೆಲ್ಲ ಒಗ್ಗೂಡಿ ಹಿರಿಯರು ಹಾಗೂ ಹುಡುಗರೆಲ್ಲಾ ಸೇರಿ ಕೆರೆಕಟ್ಟೆಯ ಹತ್ತಿರ ಹೋಗಿ ಜೇಡಿಮಣ್ಣಿನಿಂದ ಗೊಂಬೆಯೊಂದನ್ನು ತಯಾರಿಸಿ ಅದನ್ನು ಹಲಗೆ ಮೇಲಿಡುತ್ತಾರೆ. ಒಬ್ಬ ಹುಡುಗನು ಅಥವಾ ಹಿರಿಯರೊಬ್ಬರ ತಲೆ ಮೇಲೆ ಪ್ರತಿನಿತ್ಯ ಸಂಜೆ ಸಮಯ ಹೊರಿಸಿಕೊಂಡು ಮಳೆರಾಯನನ್ನು ಕುರಿತ ಹಾಡುಗಳನ್ನು ಹೇಳುತ್ತಾ, ಸಿಳ್ಳೆ ಹಾಕುತ್ತಾ, ಮನೆಮನೆಗಳ ಮುಂದೆ ಹೋಗುತ್ತಾರೆ. ಆಗ ಮಹಿಳೆಯರು ಮಕ್ಕಳು ಅರಿಶಿಣ, ಕುಂಕುಮ, ಹೂಗಳನ್ನಿಟ್ಟು ಭಕ್ತಿಯಿಂದ ಪೂಜಿಸುತ್ತಾರೆ. ಮಳೆರಾಯನ ಗೊಂಬೆ ಹೊತ್ತ ಹುಡುಗನ ಮೇಲೆ ತಣ್ಣೀರನ್ನು ಸಂಪೂರ್ಣ ಒದ್ದೆಯಾಗುವವರೆಗೂ ಸುರಿಯುತ್ತಾರೆ.

ಮೂರು ದಿನಗಳ ಕಾಲ ನಡೆಯುವ ಈ ಪೂಜೆಯನ್ನು ಮಾಡಿದ ಮೇಲೆ ಮಳೆ ಬಂದೇ ತೀರುತ್ತದೆ ಎಂಬ ಅಚಲವಾದ ನಂಬಿಕೆ ಗ್ರಾಮೀಣ ಭಾಗದ ಜನರದ್ದು.

ಹೊನ್ನರಾಜು, ರಮೇಶ್, ಏಜೆಂಟ್ ಗೋವಿಂದರಾಜು, ಮುನಿರಾಜು, ಬೀಚನಹಳ್ಳಿ ಮಂಜುನಾಥ್, ಸುರೇಶ್, ಖಾಜಿಪಾಳ್ಯ ಗಂಗರಾಜು, ನಟರಾಜ್, ರಾಜ, ಮೋಹನ್ ಕುಮಾರ್, ನಾಗೇಶ್ ಇತರರು ಇದ್ದರು.

ಕುದೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಮಳೆಗಾಗಿ ಮಳೆರಾಯನ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.