ರಾಮನಗರ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರು ಗ್ರಾಮದ ನಗಾರಿ ಸಿದ್ದಯ್ಯ (75) ಅವರು ಶುಕ್ರವಾರ ಅನಾರೋಗ್ಯದಿಂದಾಗಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ತಮಟೆ ಕಲಾವಿದ ಬಾನಂದೂರು ಕುಮಾರ ಹಾಗೂ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಪಿಳ್ಳಯ್ಯ ಮತ್ತು ಹುಚ್ಚಮ್ಮ ದಂಪತಿ ಪುತ್ರರಾದ ಸಿದ್ದಯ್ಯ ಅವರದ್ದು ಕಲಾವಿದರ ಕುಟುಂಬ. ತಂದೆಯೂ ನಗಾರಿ ಕಲಾವಿದರಾಗಿದ್ದರಿಂದ ಆ ಕಲೆಯು ಸಿದ್ದಯ್ಯ ಅವರಿಗೆ ಬಳುವಳಿಯಾಗಿ ಬಂತು. ತಾಯಿ ಸೋಬಾನೆ ಕಲಾವಿದೆ. ಸಿದ್ದಯ್ಯ ಅವರ ಪತ್ನಿ ಬೋರಮ್ಮ ಅವರು ಸಹ ಸೋಬಾನೆ ಕಲಾವಿದೆ. ಅವರ ಸಹೋದರ ಬಾನಂದೂರು ಕೆಂಪಯ್ಯ ಅವರು ಕೂಡ ಜನಪ್ರಿಯ ಜಾನಪದ ಗಾಯಕ.
ನಗಾರಿ ಕಲೆಯಲ್ಲಿ ಸಿದ್ದಯ್ಯ ಅವರು ಮಾಡಿದ ಸಾಧನೆ ಗಮನಿಸಿದ ರಾಜ್ಯ ಸರ್ಕಾರ 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಅನಾರೋಗ್ಯದಿಂದಾಗಿ ಸಿದ್ದಯ್ಯ ಅವರು ಕೆಲ ವರ್ಷಗಳಿಂದ ನಗಾರಿ ಬಾರಿಸುವುದನ್ನು ಬಿಟ್ಟಿದ್ದರು. ಕೆಲ ತಿಂಗಳ ಹಿಂದೆ ಜಾನಪದ ಲೋಕದಲ್ಲಿ ನಡೆದಿದ್ದ ಲೋಕಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ್ದ ಅವರು, ಮತ್ತೆಲ್ಲೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.