ADVERTISEMENT

ಪಶು ವೈದ್ಯರನ್ನು ಬಿಡುಗಡೆಗೊಳಿಸುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 15:57 IST
Last Updated 8 ಡಿಸೆಂಬರ್ 2023, 15:57 IST
ಕನಕಪುರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಹಶೀಲ್ದಾರ್‌ ಡಾ.ಸ್ಮಿತಾರಾಮ್‌ ಗೆ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮನವಿ ಪತ್ರ ಸಲ್ಲಿಸಿದರು
ಕನಕಪುರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಹಶೀಲ್ದಾರ್‌ ಡಾ.ಸ್ಮಿತಾರಾಮ್‌ ಗೆ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಮನವಿ ಪತ್ರ ಸಲ್ಲಿಸಿದರು   

ಕನಕಪುರ: ಪಶು ಇಲಾಖೆಯ ವೈದ್ಯರು ಹಾಗೂ ನೌಕರರನ್ನು ಕೃಷಿ ಇಲಾಖೆಯ ಇತರೆ ಕೆಲಸ ಮಾಡಲು ನಿಯೋಜನೆ ಮಾಡಿರುವುದನ್ನು ವಿರೋಧಿಸಿ, ಸರ್ಕಾರವು ಕೂಡಲೇ ಅವರನ್ನು ಆ ಕೆಲಸದಿಂದ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ರಾಮನಗರ ಜಿಲ್ಲೆಯು ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಗೆ ಹೆಸರುವಾಸಿಯಾಗಿದ್ದು ಶೇ 90 ರಷ್ಟು ರೈತರು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ ಹೈನುಗಾರಿಕೆ ಹೆಚ್ಚಿರುವುದರಿಂದ ರಾಸುಗಳ ಸಂಖ್ಯೆಯು ಹೆಚ್ಚಾಗಿದ್ದು ಪಶು ಇಲಾಖೆಗಳ ಕೆಲಸವು ಹೆಚ್ಚಿದೆ. ಆದರೆ ಪಶುವೈದ್ಯರನ್ನು ಕೃಷಿ ಇಲಾಖೆಯ ಕೆಲಸಕ್ಕೆ ನಿಯೋಜನೆ ಮಾಡಲಾಗಿದ್ದು, ರೈತರಿಗೆ ಈ ವೈದ್ಯರ ಸೇವೆ ಸಿಗುತ್ತಿಲ್ಲ ಎಂದರು.

ಜಾನುವಾರುಗಳಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿದ್ದು, ನಿರ್ವಹಣೆಯು ಹೆಚ್ಚಿನ ಜವಾಬ್ದಾರಿಯಾಗಿದೆ. ತಾಲ್ಲೂಕಿನಲ್ಲಿ ಈಗಾಗಲೆ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆಯು ಇದೆ. ಇದರ ನಡುವೆಯೇ ಕೃಷಿ ಇಲಾಖೆಯ ಕೆಲಸಗಳಿಗೆ ಪಶುವೈದ್ಯರನ್ನು ನಿಯೋಜಿಸಿರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.

ಜಿಲ್ಲಾಧಿಕಾರಿ ಅವರು,  ಕೂಡಲೇ ಪಶು ವೈದ್ಯರನ್ನು ಕೃಷಿ ಇಲಾಖೆ ನಿಯೋಜನೆಯಿಂದ ಕೈ ಬಿಡಬೇಕು. ಪಶು ಇಲಾಖೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವಂತೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಬಳಿಕತಹಶೀಲ್ದಾರ್‌ ಡಾ.ಸ್ಮಿತಾ ರಾಮ್‌ ಅವರಿಗೆ ಮನವಿ ಸಲ್ಲಿಸಿದರು. ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೂಗಿ ಗಿರಿಯಪ್ಪ, ಗಬ್ಬಾಡಿ ಕಾಡೇಗೌಡ, ಭಾಸ್ಕರ್, ವೀರೇಶ್, ಮಂಜುನಾಥ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.