ADVERTISEMENT

ಕನಕಪುರ | ಬುದ್ಧಿ ಹೇಳಿದ ಪಶುವೈದ್ಯನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 16:19 IST
Last Updated 7 ಮಾರ್ಚ್ 2024, 16:19 IST

ಕನಕಪುರ: ತಾಲ್ಲೂಕಿನ ಸಾತನೂರು ಸಂತೇಮಾಳದಲ್ಲಿ ಬುಧವಾರ ಪಶು ಔಷಧಿ ಅಂಗಡಿಯೊಂದರ ಮಾಲೀಕರ ಜೊತೆ ಗಲಾಟೆ ಮಾಡುತ್ತಿದ್ದ ಯುವಕರಿಗೆ ಬುದ್ಧಿಮಾತು ಹೇಳಿದ ಪಶುವೈದ್ಯರೊಬ್ಬರ ಮೇಲೆಯೇ ಹಲ್ಲೆ ನಡೆಸಲಾಗಿದೆ. 

ಸಾತನೂರು ಹೋಬಳಿಯ ಹಲಸೂರು ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ.ಗಿರೀಶ್ ಹಲ್ಲೆಗೊಳಗಾದವರು. ಸುರೇಶ್ ಅಲಿಯಾಸ್ ಆರ್‌ಬೆರಳು, ಸುನೀಲ್ ಅಲಿಯಾಸ್ ಮದಕರಿ, ಚೇತನ್ ಅಲಿಯಾಸ್ ಚೆನ್ನಿಗರಾಯ ಹಲ್ಲೆ ಮಾಡಿದ ಆರೋಪಿಗಳು. 

ಸಂತೇಮಾಳದ ಶ್ರೀಬಾಲಾಜಿ ವೆಟ್ ಫಾರ್ಮ್ ಮೆಡಿಕಲ್ ಸ್ಟೋರ್‌ನ ಮಾಲೀಕ ಮಂಜುನಾಥ್ ಜತೆಗೆ ಬುಧವಾರ ಸಂಜೆ ಯುವಕರು ಜಗಳ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಪಶು ಔಷಧಿ ಕೊಳ್ಳಲು ಬಂದಿದ್ದ ಡಾ.ಗಿರೀಶ್, ಯುವಕರಿಗೆ ಗಲಾಟೆ ಮಾಡಬೇಡಿ. ಸುಮ್ಮನೆ ಹೋಗಿ ಎಂದಿದ್ದಾರೆ. ‘ನಮಗೆ ಬುದ್ಧಿ ಹೇಳಲು ನೀನ್ಯಾರು’ ಎಂದು ಯುವಕರು ಕ್ಯಾತೆ ತೆಗೆದಿದ್ದಾರೆ. ಇದನ್ನು ಗಿರೀಶ್ ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡಲು ಯತ್ನಿಸಿದಾಗ, ಮೊಬೈಲ್ ಕಿತ್ತುಕೊಂಡ ಯುವಕರು ಹಲ್ಲೆ ಮಾಡಿದ್ದಾರೆ.

ADVERTISEMENT

‘ಆರೋಪಿಗಳು ತಮಗೆ ಚಪ್ಪಲಿಯಿಂದ ಹೊಡೆದು, ಉಗುರುಗಳಿಂದ ಪರಚಿ, ಔಷಧಿ ಬಾಟಲಿಗಳನ್ನು ಹೊಡೆದು ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಡಾ. ಗಿರೀಶ್ ಅವರು ಸಾತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.