ಚನ್ನಪಟ್ಟಣ: ತಾಲ್ಲೂಕಿನ ಕೆಂಗಲ್ ಬಳಿ ಶುಕ್ರವಾರ ರಾತ್ರಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಒಂದು ಕಾಡಾನೆ ಹಾಗೂ ಎರಡು ಮರಿ ಆನೆಗಳು ಕಾಣಿಸಿಕೊಂಡು ವಾಹನ ಸವಾರರು ಆತಂಕಗೊಂಡಿದ್ದಾರೆ.
ಕಾಡಾನೆಯು ಕೆಂಗಲ್ ಆಸುಪಾಸಿನ ಕಾಡಿನಿಂದ ಮತ್ತೊಂದು ಕಡೆಗೆ ಹೋಗಲು ಹೆದ್ದಾರಿ ದಾಟಿದೆ. ಇದನ್ನು ನೋಡಿದ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಆನೆ ತನ್ನ ಎರಡು ಮರಿ ಜತೆ ಹೆದ್ದಾರಿಯಲ್ಲಿ ಸ್ವಲ್ಪ ದೂರ ಸಾಗಿ ನಂತರ ಕುವೆಂಪು ಕಾಲೇಜು ಬಳಿಯಿಂದ ಕೆಮ್ಮಣ್ಣುಗುಡ್ಡೆ ಪ್ರದೇಶದತ್ತ ಸಾಗಿದೆ.
ಈ ಭಾಗದಲ್ಲಿ ಕಳೆದ ಎರಡು ಮೂರು ದಿನಗಳಿಂದ ರಾತ್ರಿ ಹೊತ್ತು ಆನೆಗಳು ಕಾಣಿಸಿಕೊಳ್ಳುತ್ತಿವೆ. ಗುರುವಾರ ತಡರಾತ್ರಿ ಸಹ ಆನೆಯೊಂದು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಕಾಣಿಸಿಕೊಂಡಿತ್ತು ಎಂದು ಅಕ್ಕಪಕ್ಕದ ಗ್ರಾಮಗಳ ಜನರು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ರಾತ್ರಿ ವೇಳೆ ಹಲವು ವಾಹನಗಳು ಚಲಿಸುತ್ತವೆ. ಇಂತಹ ವೇಳೆಯಲ್ಲಿ ಕಾಡಾನೆಗಳು ಹೆದ್ದಾರಿಗೆ ಬಂದರೆ ಪ್ರಯಾಣಿಕರಿಗೆ ಅಪಾಯವಾಗುವ ಸಂಭವವಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕು ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.