ಮಾಗಡಿ: ಶುದ್ಧ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದು ಜೆ.ಪಿ.ನಗರ ರೋಟರಿ ಅಧ್ಯಕ್ಷರು ಟಿ.ಎಸ್.ಶ್ರೀನಿವಾಸ್ ರಾವ್ ಹೇಳಿದರು.
ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ಬೆಂಗಳೂರಿನ ಜೆ.ಪಿ ನಗರ ರೋಟರಿ ಹಾಗೂ ರೋಟರಿ ಮಾಗಡಿ ಸೆಂಟ್ರಲ್ ವತಿಯಿಂದ 500 ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಘಟಕಗಳ ವಿತರಿಸಿ ಅವರು ಮಾತನಾಡಿದರು.
ಅಶುದ್ಧ ನೀರಿನಿಂದ ಸಾಕಷ್ಟು ಕಾಯಿಲೆಗಳು ಬರುತ್ತವೆ. ಮಕ್ಕಳು ಶುದ್ಧ ನೀರು ಕುಡಿಯುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆರೋಗ್ಯ ಚೆನ್ನಾಗಿ ಇದ್ದರೆ ಶಾಲೆಗೆ ಸರಿಯಾದ ಸಮಯಕ್ಕೆ ಬಂದು ಪಾಠಗಳನ್ನು ಕಲಿಯಬಹುದು. ಈ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಗುಣಮಟ್ಟದ ಶುದ್ಧ ನೀರು ಘಟಕಗಳನ್ನು ಅಳವಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ರೋಟರಿ ಮಾಗಡಿ ಸೆಂಟ್ರಲ್ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶುದ್ಧ ನೀರು ಘಟಕಗಳು ಇಲ್ಲದ ಕಾರಣ ಬೋರ್ವೆಲ್ ನೀರನ್ನೇ ನೇರವಾಗಿ ಮಕ್ಕಳು ಬಳಸುತ್ತಿದ್ದರು. ಇದೀಗ ರೋಟರಿ ಸಂಸ್ಥೆಯಿಂದ ಗುಣಮಟ್ಟದ ಶುದ್ಧ ನೀರಿನ ಯಂತ್ರಗಳನ್ನು ಅಳವಡಿಸಲಾಗಿದ್ದು, ಮಕ್ಕಳು ಶುದ್ಧ ಕುಡಿಯುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ತಾಲೂಕಿನ 9ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ 500 ಲೀಟರ್ ಸಾಮರ್ಥ್ಯದ ಶುದ್ಧ ನೀರಿನ ಘಟಕಗಳನ್ನು ಉಚಿತವಾಗಿ ಅಳವಡಿಸಲಾಯಿತು.
ರೋಟರಿ ಸಹಾಯ ಜಿಲ್ಲಾ ಪಾಲಕರು ಅಮರ್ ಚೇತನ್, ಮಾಗಡಿ ರೋಟರಿ ಕಾರ್ಯದರ್ಶಿ ಶಂಕರ ಮೂರ್ತಿ, ಸುಧೀಂದ್ರ, ಮೋಹನ್, ಕುಮಾರ್, ಜಯಶಂಕರ್, ಗಣೇಶ, ವಿನೋದ್, ಅಶ್ವತ್ಥ್, ಮೂರ್ತಿ, ದಕ್ಷಿಣಮೂರ್ತಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.