ADVERTISEMENT

ಕನಕಪುರ: ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಡಾ. ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 5:28 IST
Last Updated 21 ಜೂನ್ 2024, 5:28 IST
ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಮಾತನಾಡಿದರು, ಅನಸೂಯ ಮಂಜುನಾಥ್‌, ಬಿ.ನಾಗರಾಜು,ಕೆ.ಪಿ.ಕುಮಾರ್‌ ಹಾಗೂ ಎರಡು ಪಕ್ಷದ ಮುಖಂಡರು ಉಪಸ್ಥಿತರಿದ್ದರು
ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಮಾತನಾಡಿದರು, ಅನಸೂಯ ಮಂಜುನಾಥ್‌, ಬಿ.ನಾಗರಾಜು,ಕೆ.ಪಿ.ಕುಮಾರ್‌ ಹಾಗೂ ಎರಡು ಪಕ್ಷದ ಮುಖಂಡರು ಉಪಸ್ಥಿತರಿದ್ದರು   

ಕನಕಪುರ: ಸಂಪತ್ತಿಗೆ ಬೆಲೆ ಕಟ್ಟಬಹುದು, ಮತಕ್ಕೆ ಬೆಲೆ ಕಟ್ಟಲಾಗದು. ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದುದು ಮತದಾನ, ಆ ಮೂಲಕ ನನಗೆ ಅಧಿಕಾರ ಮತ್ತು ಶಕ್ತಿಯನ್ನು ಕೊಟ್ಟಿದ್ದೀರಿ. ಇದು ನನ್ನ ಗೆಲುವಲ್ಲ, ನಿಮ್ಮ ಗೆಲುವು ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಹೇಳಿದರು.

ಗುರುವಾರ ಕನಕಪುರಕ್ಕೆ ಭೇಟಿ ಕೊಟ್ಟ ಅವರು ಕ್ಷೇತ್ರದ ಮತದಾರರು ಹಾಗೂ ಬಿಜೆಪಿ-ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

ಸಂಸದರು ಕನಕಪುರಕ್ಕೆ ಬರುತ್ತಿದ್ದಂತೆ ತುಂಗಣಿ ಸರ್ಕಲ್‌ನಲ್ಲಿ ದೊಡ್ಡಗಾತ್ರದ ಗುಲಾಬಿ ಹೂವಿನ ಹಾರ ಹಾಕಿ ಎರಡೂ ಪಕ್ಷದ ಮುಖಂಡರು ಸ್ವಾಗತ ಕೋರಿದರು. ಇದಕ್ಕೂ ಮುನ್ನ ಹೆದ್ದಾರಿ ಬದಿಯಲ್ಲಿ ಸಂಸದರು ಸಸಿ ನೆಟ್ಟರು. ಬಳಿಕ ಅವರನ್ನು ತೆರೆದ ವಾಹನದಲ್ಲಿ ಅವರನ್ನು ಎಂ.ಜಿ.ರಸ್ತೆಯ ಮೂಲಕ ಚನ್ನಬಪಸ್ಪ ವೃತ್ತದವರೆಗೆ ಮೆರವಣಿಗೆಯ ಮೂಲಕ ಕರೆತಂದರು.

ADVERTISEMENT

ಬಳಿಕ ಮಾತನಾಡಿದ ಮಂಜುನಾಥ್ ಅವರು, ಆ ಪಕ್ಷ, ಈ ಪಕ್ಷ ಎಂದು ಫಲಿತಾಂಶದವರೆಗೆ ಮಾತ್ರ ನೋಡಬೇಕು. ನಂತರ ಮತ ಹಾಕಿದವರು, ಹಾಕದವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಡುವ ಮೂಲಕ ದ್ವೇ‍ಷದ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು ಎಂದು ಕಿವಿಮಾತು ಹೇಳಿದರು.

ಇಲ್ಲಿ ಆಗಬೇಕಿರುವ ರೈಲ್ವೆ ಯೋಜನೆಯನ್ನು ಕೇಂದ್ರ ಸಚಿವ ಎಚ್.ಡಿ.  ಕುಮಾರಸ್ವಾಮಿ ಮತ್ತು ಸಂಸದ ಸೋಮಣ್ಣ ಅವರ ಮೂಲಕ ಸಾಕಾರಗೊಳಿಸಲು ಪ್ರಾರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಇಂದು ಹೃದಯಾಘಾತದಿಂದ ಸಾವನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಅಗತ್ಯವಾದ ಚಿಕಿತ್ಸೆ ಸಿಗಬೇಕಿದ್ದು, ತಾತ್ಕಲಿಕವಾಗಿ ರಕ್ಷಣೆ ಮಾಡಲು 45 ತಾಲ್ಲೂಕುಗಳಲ್ಲಿ ಟಫ್‌ ಅಂಡ್‌ ಸ್ಕೋಪ್‌ ಮಾಡೆಲ್‌ ಅನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಅನಸೂಯ ಮಂಜುನಾಥ್‌ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಕನಕಪುರದಿಂದ ಅಚ್ಚಲು, ಸಾತನೂರು, ದೊಡ್ಡಾಲಹಳ್ಳಿ, ಕೋಡಿಹಳ್ಳಿ, ಹುಣಸನಹಳ್ಳಿ ಗ್ರಾಮದಲ್ಲಿ ಸಭೆ ನಡೆಸಿ ಮತದಾರರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಪಿ. ಕುಮಾರ್‌ ನೇತೃತ್ವದಲ್ಲಿ ಎರಡು ಪಕ್ಷದ ಪದಾಧಿಕಾರಿಗಳು, ನೂರಾರು ಮುಖಂಡರು, ಕಾರ್ಯಕರ್ತರು, ಮಹಿಳಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.