ADVERTISEMENT

ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಅಸಹ್ಯ ಹುಟ್ಟಿಸುತ್ತಿವೆ: ಶಾಸಕ ಇಕ್ಬಾಲ್ ಹುಸೇನ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 4:27 IST
Last Updated 8 ಅಕ್ಟೋಬರ್ 2024, 4:27 IST
ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೇಡಮಾರನಹಳ್ಳಿ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ಇಕ್ಬಾಲ್‌ಹುಸೇನ್ ಭೂಮಿ ಪೂಜೆ ನೆರವೇರಿಸಿದರು.
ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೇಡಮಾರನಹಳ್ಳಿ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ಇಕ್ಬಾಲ್‌ಹುಸೇನ್ ಭೂಮಿ ಪೂಜೆ ನೆರವೇರಿಸಿದರು.   

ಹಾರೋಹಳ್ಳಿ: ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಜನಸಾಮಾನ್ಯರಲ್ಲಿ ಅಸಹ್ಯ ಹುಟ್ಟಿಸುತ್ತಿವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಹಾರೋಹಳ್ಳಿ ಪಟ್ಟಣ ಸೇರಿದಂತೆ ಹಲವೆಡೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಮಿತಿ ಮೀರಿದ ದ್ವೇಷದ ರಾಜಕಾರಣ ಶುರುವಾಗಿದೆ, ಅಭಿವೃದ್ಧಿ ಕುಂಠಿತವಾಗುತ್ತಿದೆ. ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಟಿ, ಮತ್ತೊಂದು ಕಡೆ ಅನಾವೃಷ್ಟಿಯಿಂದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ, ರಾಜಕೀಯ ಪಕ್ಷಗಳು ದ್ವೇಷ ಅಸೂಯೆ, ಮತ್ಸರದಿಂದಾಗಿ ಒಬ್ಬರ ಮೇಲೋಬ್ಬರು ದೂರು ಪ್ರತಿದೂರು ದಾಖಲಿಸುವಲ್ಲಿ ನಿರತವಾಗಿವೆ. ಮಾಧ್ಯಮಗಳಲ್ಲಿ ಇದರ ವೈಭವೀಕರಣ ನಡೆಯುತ್ತಿದೆ. ಜನಪ್ರತಿನಿಧಿಗಳು ಅಭಿವೃದ್ಧಿಯನ್ನು ಬದಿಗಿಟ್ಟು ದ್ವೇಷ ರಾಜಕಾರಣದಲ್ಲಿ ನಿರತರಾಗಿದ್ದು, ಇಂತಹ ಪ್ರವೃತ್ತಿಗಳು ದೂರವಾಗಬೇಕು ಎಂದರು.

ಪುರಸಭೆಯಾಗಿ ಮೇಲ್ದರ್ಜೆಗೆ: ಹಾರೋಹಳ್ಳಿ ಪಟ್ಟಣ ಪಂಚಾಯಿತಿಯನ್ನು ಶ್ರೀಘ್ರವೇ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗಲಿದೆ ಎಂದರು. 

ADVERTISEMENT

ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕಾವೇರಿ ಕುಡಿಯುವ ನೀರಿನ ಸೌಲಭ್ಯಗಳಿಗೆ ಹೆಚ್ಚು ಒತ್ತು ನೀಡಲಾಗುವುದು. ಇದಕ್ಕೆ ಪೂರಕವಾಗಿ ಇಂದು ಚಾಮುಂಡೇಶ್ವರಿ ಬಡಾವಣೆಯಲ್ಲಿ, ಜನತಾ ಕಾಲೋನಿ, ಹಳೆ ಬೀದಿ, ರಂಗನಾಥ ಬಡಾವಣೆಗಳಲ್ಲಿ ಚರಂಡಿ, ರಸ್ತೆ ನಿರ್ಮಾಣ ಮತ್ತು ಪೈಪ್ ಲೈನ್ ಅಳವಡಿಕೆ ಕಾಮಗಾರಿಗಳು, ಗಬ್ಬಾಡಿ, ಕೊಂಡೆಗೌಡನದೊಡ್ಡಿ ಗ್ರಾಮದಲ್ಲಿ ಚರಂಡಿ ನಿರ್ಮಾಣ ಮತ್ತು ಪೈಪ್ ಲೈನ್ ಅಳವಡಿಕೆ, ಕಳ್ಳಿಭೀಮಸಂದ್ರ, ತಾಮಸಂದ್ರ, ಗಾಣಾಳುದೊಡ್ಡಿ ಗಿರೇನಹಳ್ಳಿ, ಸಿದ್ದಾಪುರ ಮೇಡಮಾರನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಜೆ ಪೂಜೆ ನೆರವೇರಿಸಲಾಗಿದೆ ಎಂದರು. ಕುಡಿಯುವ ನೀರು ಕಾಮಗಾರಿಗೆ ₹ 36 ಕೋಟಿ, ಮೂಲಭೂತ ಸೌಕರ್ಯಕ್ಕೆ ₹ 4 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ತಹಶೀಲ್ದಾರ್ ಶಿವಕುಮಾರ್.ಆರ್.ಸಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾಬಾಯಿ, ಗ್ಯಾರೆಂಟಿ ಅನುಷ್ಠಾನ ಜಿಲ್ಲಾಧ್ಯಕ್ಷ ಕೆ.ರಾಜು, ತಾಲ್ಲೂಕು ಅಧ್ಯಕ್ಷ ಜೆ.ಸಿ.ಬಿ ಅಶೋಕ್, ಬಮುಲ್ ನಿರ್ದೇಶಕ ಎಚ್.ಎಸ್. ಹರೀಶ್‌ಕುಮಾರ್, ಮುಖಂಡರಾದ ಭುಜಂಗಯ್ಯ, ಈಶ್ವರ್, ಕೋಟೆ ಕುಮಾರ್, ಪರಮೇಶ್, ದಿನೇಶ್, ಕಾಳಮ್ಮ, ರಾಜು ,ಶ್ರೀನಿವಾಸ್ , ಸುರೇಶ್, ಶಶಿ ಭಾರ್ಗವ್,ಮುಂತಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.