ADVERTISEMENT

ಕಾರ್ಯೋತ್ತಡ ತಂದ ಫ್ರೂಟ್ ಐಟಿ ಸೃಜನೆ

ಒತ್ತಡ ನಿವಾರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಕಂದಾಯ ನೌಕರರ ಸಂಘ ಒತ್ತಾಯ‌

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 14:47 IST
Last Updated 7 ಡಿಸೆಂಬರ್ 2023, 14:47 IST
<div class="paragraphs"><p>ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ರಾಮನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.</p></div>

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ರಾಮನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

   

ರಾಮನಗರ: ಕಂದಾಯ ಇಲಾಖೆ ನೌಕರರಿಗೆ ಹೆಚ್ಚುವರಿಯಾಗಿ ಬರ ಪರಿಹಾರಕ್ಕೆ ಆಧಾರವಾಗಿರುವ ಫ್ರೂಟ್ ಐ.ಡಿ ಸೃಜನೆ ಕೆಲಸ ವಹಿಸಿರುವುದರಿಂದ ಹೆಚ್ಚಾಗಿರುವ ಕಾರ್ಯೋತ್ತಡ ನಿವಾರಣೆ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.

ಕಚೇರಿಯಲ್ಲಿ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಫ್ರೂಟ್ ಐ.ಡಿ ಸೃಜನೆ ಕೆಲಸವು ತೋಟಗಾರಿಕೆ ಮತ್ತು ಕೃಷಿ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಇದೀಗ, ಅವರ ಕೆಲಸವನ್ನು ಹೆಚ್ಚುವರಿಯಾಗಿ ನಮಗೆ ಹೊರಿಸಲಾಗಿದೆ. ಇದರಿಂದಾಗಿ, ಸಿಬ್ಬಂದಿಗೆ ಅಧಿಕ ಕಾರ್ಯೋತ್ತಡವಾಗಿದೆ. ಅಲ್ಲದೆ, ವಿಳಂಬದ ಆರೋಪವನ್ನು ನಮ್ಮ ಮೇಲೆಯೇ ಹೊರಿಸಲಾಗುತ್ತಿದೆ ಎಂದು ದೂರಿದರು.

ADVERTISEMENT

ಇಲಾಖೆಯಲ್ಲಿ ವಿವಿಧ ಕಾರಣಗಳಿಗಾಗಿ ನೌಕರರು ಎದುರಿಸುತ್ತಿರುವ ವಿಚಾರಣೆಯನ್ನು ಆರು ತಿಂಗಳೊಳಗೆ ಮುಗಿಸಬೇಕೆಂಬ ನಿರ್ದೇಶನವಿದೆ. ಆದರೂ, ಹಲವು ವರ್ಷಗಳಿಂದ ಪ್ರಕರಣಗಳ ವಿಚಾರಣೆಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ, ನೌಕರರಿಗೆ ಮುಂಬಡ್ತಿ ಸೇರಿದಂತೆ ಇತರ ಸೌಲಭ್ಯಗಳಿಗೆ ತೊಂದರೆಯಾಗಿದೆ. ಹಾಗಾಗಿ, ತ್ವರಿತವಾಗಿ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಬೇರೆ ಜಿಲ್ಲೆಗಳಿಗೆ ನಿಯೋಜನೆ ಮಾಡಿರುವುದರಿಂದ, ಜಿಲ್ಲೆಯೊಳಗಿನ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಖಾಲಿ ಹುದ್ದೆಗಳ ಸಮಸ್ಯೆಯಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿರುವ ದೂರುಗಳಿವೆ. ಹಾಗಾಗಿ, ಬೇರೆಡೆಗೆ ನಿಯೋಜನೆ ಆಗಿರುವವರನ್ನು ಸ್ವಸ್ಥಾನಕ್ಕೆ ಕರೆಸಬೇಕು ಎಂದು ಮನವಿ ಮಾಡಿದರು.

ಇಲಾಖೆಯ ನೌಕರರಿಗೆ ಹಲವು ವರ್ಷಗಳಿಗೆ ಪದೋನ್ನತಿ ಸಿಕ್ಕಿಲ್ಲ. ಇದರಿಂದಾಗಿ, ಹಲವರು ಹಂಚಿತರಾಗಿದ್ದು, ಕೆಲವರು ನಿವೃತ್ತಿ ಕೂಡ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿ ಮಾದರಿಯಲ್ಲಿಯೇ ರಾಮನಗರ ಜಿಲ್ಲೆಯಲ್ಲಿಯೂ ಸಹ ಜೇಷ್ಠತಾ ಪಟ್ಟಿ ಸಿದ್ದಪಡಿಸಬೇಕು. ಅರ್ಹ ನೌಕರರಿಗೆ ಪದೋನ್ನತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹರ್ಷ ಎಂ, ಗೌರವಾಧ್ಯಕ್ಷ ಎನ್. ರಮೇಶ್, ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಮೂರ್ತಿ, ಖಜಾಂಚಿ ಧರೇಶ್ ಗೌಡ, ಕಾರ್ಯಾಧ್ಯಕ್ಷ ಯತೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.