ಕನಕಪುರ: ಕಸಬಾ ಹೋಬಳಿ ನಾರಾಯಣಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗೆ ಭಾನುವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಶಾಲಾ ಕೊಠಡಿಯ ಕಿಟಕಿ ತೆರೆದ ಕಿಡಿಗೇಡಿಗಳು ತೆಂಗಿನ ಗರಿಗೆ ಬೆಂಕಿ ಹಚ್ಚಿ ಕೊಠಡಿಯೊಳಗೆ ಹಾಕಿದ್ದಾರೆ. ಕಿಟಕಿ ಮತ್ತು ಕೆಲವು ವಸ್ತುಗಳು ಭಸ್ಮವಾಗಿವೆ. ಹೆಚ್ಚಿನ ಅನಾಹುತವಾಗಿಲ್ಲ.
‘ಸೋಮವಾರ ಬೆಳಗ್ಗೆ ಶಾಲೆಯ ಬಾಗಿಲು ತೆಗೆದು ನೋಡಿದಾಗ ಕೊಠಡಿಯಲ್ಲಿ ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಈ ಹಿಂದೆಯೂ ಶಾಲೆಯಲ್ಲಿ ಸೌಂಡ್ ಬಾಕ್ಸ್, ಮಿಕ್ಸಿ ಕಳವು ಮಾಡಿದ್ದರು’ ಎಂದು ಮುಖ್ಯ ಶಿಕ್ಷಕಿ ಮುಕ್ತಾ ಭಟ್ ಗ್ರಾಮಾಂತರ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಶಾಲೆಯಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿದ್ದು ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಗ್ರಾಮ ಪಂಚಾಯಿತಿಗೆ ಅವರು ಮನವಿ ಸಲ್ಲಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಪಿಡಿಒ, ಈ ಪಂಚಾಯಿತಿ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.
ಗ್ರಾಮಾಂತರ ಠಾಣೆ ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಾತ್ರಿ ಗಸ್ತು ವ್ಯವಸ್ಥೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.