ರಾಮನಗರ: ನಗರದಲ್ಲಿ ಸಂಕ್ರಾಂತಿ ಹಬ್ಬದ ಸಡಗರ ಶುರುವಾಗಿದ್ದು, ನಗರದ ಎಪಿಎಂಸಿ ಹಾಗೂ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಅಂಗವಾಗಿ ಜಾನುವಾರುಗಳ ಅಲಂಕಾರಿಕ ವಸ್ತುಗಳು, ಅವರೆಕಾಯಿ, ಎಳ್ಳುಬೆಲ್ಲ, ಕಬ್ಬು, ಗೆಣಸು, ಕಡಲೆಕಾಯಿ ಹಾಗೂ ಇನ್ನಿತರ ವಸ್ತುಗಳು ಮಾರಾಟ ಮಾರುಕಟ್ಟೆಯಲ್ಲಿ ಕಂಡುಬಂತು.
ಜನರು ಬೆಳಿಗ್ಗೆಯೇ ಎಪಿಎಂಸಿಗೆ ಬಂದು ಹಬ್ಬಕ್ಕೆ ಬೇಕಾದ ತರಕಾರಿ, ಪೂಜಾ ಸಾಮಗ್ರಿ, ಜಾನುವಾರು ಅಲಂಕಾರಿಕ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಿದರು. ಮಾರುಕಟ್ಟೆಯಾಚೆಗಿನ ಬೆಂಗಳೂರು–ಮೈಸೂರು ರಸ್ತೆ ಬದಿಯೂ ರೈತರು ಹಾಗೂ ವ್ಯಾಪಾರಿಗಳು ಕಬ್ಬು ಸೇರಿದಂತೆ ವಿವಿಧ ಹಬ್ಬದ ಸಾಮಗ್ರಿಗಳ ಮಾರಾಟದಲ್ಲಿ ತೊಡಗಿದ್ದರು.
ಕಳೆ ವರ್ಷಕ್ಕೆ ಹೋಲಿಸಿದರೆ ಈ ಸಲ ಮಳೆ ಕೊರತೆ ಕಾರಣಕ್ಕೆ ಮಾರುಕಟ್ಟೆಯಲ್ಲಿ ಅವರೆಕಾಯಿ ಸ್ವಲ್ಪ ದುಬಾರಿಯಾಗಿತ್ತು. ನಾಟಿ ಅವರೆಕಾಯಿ ಪ್ರತಿ ಕೆ.ಜಿ.ಗೆ ₹70–₹90 ಇದ್ದರೆ, ಉಳಿದ್ದದ್ದು ₹40–₹50ಕ್ಕೆ ಮಾರಾಟವಾಗುತ್ತಿತ್ತು. ಕಬ್ಬಿನ ದರ ₹25ರಿಂದ ₹30 ಇತ್ತು. ಹೂವುಗಳ ಬೆಲೆ ಎಂದಿನಂತೆ ಸ್ವಲ್ಪ ಏರಿಕೆಯಾಗಿತ್ತು. ಸೇವಂತಿ ಹೂವನ್ನು ಗ್ರಾಹಕರು ಹೆಚ್ಚಾಗಿ ಖರೀದಿಸಿದರು.
‘ಈ ವರ್ಷ ಸಂಕ್ರಾಂತಿ ಹಬ್ಬಕ್ಕೆ ಎಲ್ಲದರ ಬೆಲೆ ಜಾಸ್ತಿಯಾಗಿದೆ. ಬರದ ಕಾರಣದಿಂದಾಗಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬದಲು, ಸರಳವಾಗಿ ಆಚರಿಸಲು ತೀರ್ಮಾನಿಸಿದ್ದೇನೆ. ಹಣ್ಣು, ಹೂವು, ತರಕಾರಿ ಸೇರಿದಂತೆ ಎಲ್ಲದರ ಬೆಲೆ ಗಗನಕ್ಕೇರಿದೆ’ ಎಂದು ರೈತ ಪುಟ್ಟಸ್ವಾಮಿ ಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.