ರಾಮನಗರ: ಜಿಲ್ಲಾ ಎಸ್.ಸಿ ಮತ್ತು ಎಸ್.ಟಿ ನೌಕರರ ಸಂಘದ ನೂತನ ಕಚೇರಿಯ ಉದ್ಘಾಟನೆ ನಗರದಲ್ಲಿ ಗುರುವಾರ ಜರುಗಿತು. ಜಿಲ್ಲಾ ದಲಿತ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ, ಸಂಘದ ಸಲಹೆಗಾರ ಗವಿಯಯ್ಯ, ಅಧ್ಯಕ್ಷರಾದ ಬಸವರಾಜ ಉದ್ಘಾಟನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಿವಕುಮಾರ ಸ್ವಾಮಿ, ‘ಸಂಘವು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದೊಂದಿಗೆ ಸಮುದಾಯದ ನೌಕರರ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಂಡು ಹೋಗಬೇಕು. ಜಿಲ್ಲೆಯ ಮೇಲ್ಮಟ್ಟದ ಅಧಿಕಾರಿಗಳಿಂದಿಡಿದು ತಳಮಟ್ಟದ ನೌಕರರು ಎದುರಿಸುವ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಬೇಕು. ಈ ನಿಟ್ಟಿನಲ್ಲಿ ಒಕ್ಕೂಟವು ಸದಾ ಸಂಘದ ಜೊತೆಗಿರಲಿದೆ’ ಎಂದು ಭರವಸೆ ನೀಡಿದರು.
ಸಂಘದ ಕಚೇರಿಗೆ ಉಚಿತವಾಗಿ ಕೊಠಡಿ ಕೊಟ್ಟಿರುವ ಸಲಹೆಗಾರ ಗವಿಯಯ್ಯ, ‘ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ಸಂಘದ ಸದಸ್ಯತ್ವವನ್ನು ಪಡೆದುಕೊಳ್ಳಬೇಕು. ತಮ್ಮ ಕಚೇರಿಗಳಲ್ಲಿ ಕರ್ತವ್ಯಕ್ಕೆ ಅಡ್ಡಿ, ಮೇಲಧಿಕಾರಿಗಳ ಕಿರುಕುಳ ಸೇರಿದಂತೆ ತಾವು ಎದುರಿಸುವ ಯಾವುದೇ ರೀತಿಯ ಸಮಸ್ಯೆಗಳನ್ನು ಸಂಘದ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸಂಘದ ಕಾರ್ಯದರ್ಶಿ ಗೋಪಿನಂದನ್, ಖಜಾಂಚಿ ಪುರುಷೋತ್ತಮ್, ಬಿವಿಎಸ್ ವೆಂಕಟೇಶ್, ಹರೀಶ್ ಬಾಲು, ರಾಜ್ಯ ಪೌರ ನೌಕರರ ಸಂಘದ ಉಪಾಧ್ಯಕ್ಷ ಆರ್. ನಾಗರಾಜು, ಬಿವಿಎಸ್ ಕುಮಾರ್, ಚನ್ನಪ್ಪ, ಹರೀಶ್, ಸಂಘದ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.