ಬಿಡದಿ: ಆಲದಮರದ ದೊಡ್ಡಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಎರಡನೇ ಬಾರಿ ಉದ್ಘಾಟನೆಗೊಳ್ಳಲು ಸಿದ್ಧವಾಗಿದೆ.
2023-24ನೇ ಸಾಲಿನ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಶಾಸಕ ಬಾಲಕೃಷ್ಣ, ಗೋಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಭುಜಲಿಂಗಯ್ಯ, ಅಂದಿನ ಸಂಸದರಾದ ಡಿ.ಕೆಸುರೇಶ್ ಸೇರಿದಂತೆ ಅನೇಕ ಅಧಿಕಾರಿಗಳ ಹೆಸರಿರುವ ಶಿಲನ್ಯಾಸದ ಕಲ್ಲು ಮಾರ್ಚ್ 2024, 13ರಂದು ಉದ್ಘಾಟನೆಗೊಂಡಿದೆ.
ಈಗಾಗಲೇ ಶಾಲಾ ಕಟ್ಟಡ ಉದ್ಘಾಟನೆಯಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಲ್ಲಿನ ಸ್ಥಳೀಯ ಮುಖಂಡರ ಜತೆ ಮಾತನಾಡಿ, ’ಏಕಾಏಕಿ ಆಹ್ವಾನ ಪತ್ರಿಕೆ ಮುದ್ರಿಸಿರುವುದು ಸರಿಯಲ್ಲ ಎಂದು ತಾಕೀತು ಮಾಡಿದ್ದೇನೆ‘ ಎಂದು ಬಿಇಒ ಸೋಮಲಿಂಗಯ್ಯ ತಿಳಿಸಿದರು.
ಜುಲೈ 9ರಂದು ಶಾಲಾ ಕಟ್ಟಡ ಉದ್ಘಾಟನೆ ಎಂಬ ಆಹ್ವಾನ ಪತ್ರಿಕೆ ಹರಿದಾಡುತ್ತಿದೆ. ಆಹ್ವಾನ ಪತ್ರಿಕೆಯಲ್ಲಿ ಶಾಸಕ ಬಾಲಕೃಷ್ಣ, ಇಂದಿನ ಗೋಪಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಯ್ಯ, ಸಂಸದ ಡಾ.ಮಂಜುನಾಥ್, ಮಾಜಿ ಶಾಸಕ ಎ.ಮಂಜು ಸೇರಿದಂತೆ ಹಲವು ಮುಖಂಡರ ಹೆಸರು ಆಹ್ವಾನ ಪತ್ರಿಕೆಯಲ್ಲಿದೆ.
ಈ ಶಾಲಾ ಕಟ್ಟಡದ ಉದ್ಘಾಟನೆ ರಾಜಕೀಯಕ್ಕೆ ಬಳಸಿಕೊಳ್ಳಲಾಗಿದೆ. ಮತ್ತೊಮ್ಮೆ ಉದ್ಘಾಟಿಸಲು ಆಹ್ವಾನ ಪತ್ರಿಕೆ ಹಂಚಲಾಗಿದೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ ಗಮನಕ್ಕೆ ತರಲಾಗಿದೆ ಎಂದು ಗೋಪಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಕಾಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.