ADVERTISEMENT

ಕನಕಪುರ: ಮಕ್ಕಳಿಂದ ಶಾಲೆ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಿದ ಶಿಕ್ಷಕರು!

ಪೋಷಕರ ಆಕ್ರೋಶ: ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 15:50 IST
Last Updated 24 ಜೂನ್ 2024, 15:50 IST
ಕನಕಪುರ ಹುಲಿಬೆಲೆ ಸರ್ಕಾರಿ ಶಾಲೆಯಲ್ಲಿ ನೀರಿನ ತೊಟ್ಟಿ
ಕನಕಪುರ ಹುಲಿಬೆಲೆ ಸರ್ಕಾರಿ ಶಾಲೆಯಲ್ಲಿ ನೀರಿನ ತೊಟ್ಟಿ   

ಕನಕಪುರ: ತಾಲ್ಲೂಕಿನ ಹುಲಿಬಲೆ ಸರ್ಕಾರಿ ಶಾಲೆಯ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಲು ಮಕ್ಕಳನ್ನು ಬಳಸಿಕೊಂಡಿದ್ದಾರೆ ಎಂದು ಶಿಕ್ಷಕರ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ.

ಶಾಲೆಯ ಐವರು ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕರು ಶನಿವಾರ ನೀರಿನ ತೊಟ್ಟಿಗೆ ಇಳಿಸಿ ಸ್ವಚ್ಛಗೊಳಿಸಿದ್ದಾರೆ ಎಂದು ಪೋಷಕರು ದೂರಿದ್ದಾರೆ.  

ಕೊಳವೆ ಆಕಾರದ ಸಿಮೆಂಟ್‌ ಟ್ಯಾಂಕ್‌ಗೆ ಏಣಿ ಸಹಾಯದಿಂದ ಮಕ್ಕಳನ್ನು ಒಳಗಡೆ ಇಳಿಸಿ ಸ್ವಚ್ಛಗೊಳಿಸುವಂತೆ ಮುಖ್ಯ ಶಿಕ್ಷಕರು ಸೂಚಿಸಿದ್ದಾರೆ. ಈ ವಿಷಯ ಗೊತ್ತಾಗುತ್ತಲೇ ಶಾಲೆಗೆ ಧಾವಿಸಿದ ಪೋಷಕರು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

‘ನೀರಿನ ತೊಟ್ಟಿ ಸ್ವಚ್ಛಗೊಳಿಸಲು ಶಾಲೆಯ ಸಿಬ್ಬಂದಿಗೆ ಸೂಚಿಸಲಾಗಿತ್ತು. ಅವರು ತಮ್ಮ ಜತೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿರುವುದು ಗೊತ್ತಿಲ್ಲ’ ಎಂದು ಮುಖ್ಯ ಶಿಕ್ಷಕಿ ರಾಜಲಕ್ಷ್ಮ ಅವರು ಪೋಷಕರನ್ನು ಸಮಾಧಾನಪಡಿಸಲು ಯತ್ನಿಸಿದರು.

ಇದರಿಂದ ಸಮಾಧಾನಗೊಳ್ಳದ ಪೋಷಕರು, ಮುಖ್ಯ ಶಿಕ್ಷಕಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಅವರಿಗೆ ಕರೆ ಮಾಡಿ ಒತ್ತಾಯಿಸಿದರು.

ಹತ್ತು ಅಡಿ ಎತ್ತರದ ನೀರಿನ ತೊಟ್ಟಿಗೆ ಮಕ್ಕಳನ್ನು ಇಳಿಸಿ ಕೆಲಸ ಮಾಡಿಸಿದ್ದಾರೆ. ಒಂದು ವೇಳೆ ಏನಾದರೂ ಅನಾಹುತ ಆಗಿದ್ದರೆ ಅದಕ್ಕೆ ಯಾರು ಜವಾಬ್ದಾರರು ಎಂದು ಪೋಷಕರಾದ ತಿಮ್ಮೇಗೌಡ, ಕಾವ್ಯ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯಲ್ಲಿ ಶಿಕ್ಷಕರ ನಡುವೆ ಹೊಂದಾಣಿಕೆ ಕೊರತೆ ಇದೆ. ಇದರಿಂದ ಸಮಸ್ಯೆ ಉಲ್ಬಣಿಸಿದೆ. ಮಕ್ಕಳನ್ನು ಟ್ಯಾಂಕ್‌ಗೆ ಇಳಿಸಿದ ವಿಷಯ ವಿವಾದದ ಸ್ವರೂಪ ಪಡೆದಿದೆ. ಮುಂದೆ ಈ ರೀತಿ ಆಗದಂತೆ ಗಮನ ಹರಿಸಲಾಗುವುದು ಎಂದು ಮುಖ್ಯ ಶಿಕ್ಷಕಿ ರಾಜಲಕ್ಷ್ಮಿ ಭರವಸೆ ನೀಡಿದರು.

ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳ ಮಹಜರು ಮಾಡಲಿದ್ದಾರೆ. ಶಿಕ್ಷಕರು ಮತ್ತು ಪೋಷಕರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ.ರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ನೀತಿನ ತೊಂಬೆ ಸ್ವಚ್ಛಗೊಳಿಸಿರುವುದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.