ಕುದೂರು: ಪಟ್ಟಣದ ಲಕ್ಷ್ಮಿದೇವಿ (ಕುದೂರಮ್ಮ) ಅಗ್ನಿಕುಂಡ ಜಾತ್ರಾ ಮಹೋತ್ಸವ ಸೋಮವಾರ ಸಂಪನ್ನಗೊಂಡಿತು.
ಕೊಂಡೋತ್ಸವದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಭಾಗವಹಿಸಿದ್ದರು. ಪಟ್ಟಣದ ಪ್ರತಿ ಮನೆಗಳಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೇವಾಲಯವು ಹೂವು, ಹಣ್ಣು ಮತ್ತು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು.
ಸುಮಾರು 56 ಅಡಿ ಉದ್ದದ ಕೊಂಡಕ್ಕೆ ಸೋಮವಾರ ಬೆಳಗ್ಗೆ 10 ಗಂಟೆಗೆ ದೇವಾಲಯದ ಅರ್ಚಕ ಮಲ್ಲಯ್ಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕಗ್ಗಲಿ ಮರದ ಸೌದೆಗಳಿಗೆ ಮಹಾಮಂಗಳಾರತಿ ಮತ್ತು ಅಗ್ನಿಸ್ಪರ್ಶ ನೆರವೇರಿಸಿದರು. ಸಂಜೆ 7ರ ನಂತರ ದೇವಾಲಯದ ಆವರಣದಲ್ಲಿ ಕರಡಿವಾದ್ಯ ಮತ್ತು ವೀರಗಾಸೆ ತಂಡದವರು ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು.
ರಾತ್ರಿ 8.30ಕ್ಕೆ ಪಟ್ಟಣದ ಮಾರುತಿ ನಗರ ಮಕ್ಕಳಿಂದ ಬಾಯಿ ಬೀಗ ಸೇವೆ ನಡೆಯಿತು. ರಾತ್ರಿ ಹತ್ತು ಗಂಟೆಗೆ ಹರಕೆ ಹೊತ್ತ ಮಕ್ಕಳಿಂದ ಅಗ್ನಿ ಪ್ರವೇಶವಾಯಿತು.
ಶಾಸಕ ಎಚ್.ಸಿ.ಬಾಲಕೃಷ್ಣ, ರಾಮನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಸೇರಿದಂತೆ ಹಲವರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.