ರಾಮನಗರ: ತಾಲ್ಲೂಕಿನ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದ ದೇವಾಲಯದ ಹುಂಡಿಗಳ ಎಣಿಕೆ ಶನಿವಾರ ನಡೆದಿದ್ದು, ಒಟ್ಟು 5,15,592 ಮೊತ್ತ ಸಂಗ್ರಹವಾಗಿದೆ. ದೇವಾಲಯದ ಕಾರ್ಯನಿರ್ವಹಕಾಧಿಕಾರಿ ಎಸ್. ಸುಮಿತ್ರ, ಉಪ ತಹಸೀಲ್ದಾರ್ ರುದ್ರಮ್ಮ ಹಾಗೂ ಕಂದಾಯ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು. ಸಂಗ್ರಹಗೊಂಡ ಹಣವನ್ನು ಬ್ಯಾಂಕ್ಗೆ ಜಮಾ ಮಾಡಲಾಯಿತು.
ಈ ವೇಳೆ ಮಾತನಾಡಿದ ಎಸ್. ಸುಮಿತ್ರ, ‘ದೇವಾಲಯದ ಹುಂಡಿಗಳನ್ನು ಮೊದಲು 8 ತಿಂಗಳಿಗೆ, ನಂತರ 9 ತಿಂಗಳಿಗೆ ಹಾಗೂ ವರ್ಷಕ್ಕೆ ತೆರೆಯಲಾಗುತ್ತಿತ್ತು. ಬೆಟ್ಟದ ಮೇಲೆ ಮತ್ತು ತಪ್ಪಲು ಸೇರಿ ಎರಡು ಮೂರು ಕಡೆ ದೇವಾಲಯಗಳು ಇವೆ. ಹಾಗಾಗಿ, ಭದ್ರತಾ ದೃಷ್ಟಿಯಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕಂದಾಯ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತಿದೆ’ ಎಂದರು.
‘ದೇವಾಲಯಗಳ ಹುಂಡಿ ತೆರೆಯುವುದರಿಂದಿಡಿದು ಎಣಿಕೆ ಕಾರ್ಯ ಹಾಗೂ ಬ್ಯಾಂಕಿಗೆ ಜಮಾ ಮಾಡಲು ಹಣ ಜೋಡಿಸುವ ಎಲ್ಲಾ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಸ್ಥಳದಲ್ಲಿರುವ ಬ್ಯಾಂಕಿನ ಅಧಿಕಾರಿಗಳ ಮೂಲಕ ಇಲ್ಲಿಯೇ ಹಣವನ್ನು ಬ್ಯಾಂಕಿಗೆ ಜಮಾವಣೆ ಮಾಡಲಾಯಿತು’ ಎಂದು ಹೇಳಿದರು.
ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಪುಟ್ಟರಾಜು, ರಾಜಶೇಖರ್, ಪಾರುಪತ್ತೆದಾರ್ ಸೋಮಶೇಖರ್, ಅರ್ಚಕರಾದ ವಿಜಯ್ಕುಮಾರ್, ಮೂರ್ತಿ, ಮುಖಂಡರಾದ ಶಿವಲಿಂಗಯ್ಯ, ತಮ್ಮಣ್ಣ, ದೇವಾಲಯದ ಸಿಬ್ಬಂದಿ ಮೋನಿಷಾ, ದರ್ಶನ್ ಹಾಗೂ ಪ್ರಜ್ವಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.