ADVERTISEMENT

ಮಾಗಡಿ: ಆಭರಣ ಅಂಗಡಿ ಮಾಲೀಕನ ಮನೆಯಲ್ಲಿ 4 ಕೆ.ಜಿ ಚಿನ್ನಾಭರಣ ಕಳ್ಳತನ

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಹಿಂಬಾಗಿಲಿನಿಂದ ಬಂದು ಕೃತ್ಯ ಎಸಗಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 5:12 IST
Last Updated 23 ಸೆಪ್ಟೆಂಬರ್ 2024, 5:12 IST
<div class="paragraphs"><p>ಆಭರಣ ಅಂಗಡಿ ಮಾಲೀಕ ವೇಣುಗೋಪಾಲ್&nbsp;ಅವರ ಮನೆ</p></div>

ಆಭರಣ ಅಂಗಡಿ ಮಾಲೀಕ ವೇಣುಗೋಪಾಲ್ ಅವರ ಮನೆ

   

ಮಾಗಡಿ: ಪಟ್ಟಣದ ರಾಜಕುಮಾರ್ ಮುಖ್ಯ ರಸ್ತೆಯಲ್ಲಿರುವ ವಾಸವಾಂಭ ಬಟ್ಟೆ ಹಾಗೂ ಆಭರಣ ಗಿರವಿ ಅಂಗಡಿ ಮಾಲೀಕ ವೇಣುಗೋಪಾಲ್ ಅವರ ಮನೆಗೆ ಭಾನುವಾರ ರಾತ್ರಿ ಕನ್ನ ಹಾಕಿರುವ ಕಳ್ಳರು, ಅಂದಾಜು 4 ಕೆ.ಜಿ ಚಿನ್ನಾಭರಣ ಹಾಗೂ ₹5 ಲಕ್ಷ ನಗದು ಕದ್ದೊಯ್ದಿದ್ದಾರೆ. ಘಟನೆ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಣುಗೋಪಾಲ್ ಅವರ ಕುಟುಂಬದವರು ಆರ್ಯವೈಶ್ಯ ಸಮಾಜವು ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಂಜೆ 6.30ರ ಸುಮಾರಿಗೆ ಕುಟುಂಬದೊಂದಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿರುವ ಕಳ್ಳರು, ರಾತ್ರಿ 9.30ರಿಂದ 10.30ರೊಳಗೆ ಹಿಂಬಾಗಿಲಿನಿಂದ ಒಳಕ್ಕೆ ನುಗ್ಗಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಕೊಠಡಿಯಲ್ಲಿದ್ದ ಅಲ್ಮೇರಾ ಒಡೆದಿರುವ ಕಳ್ಳರು ಸಣ್ಣ ಸಣ್ಣ ಲಾಕರ್‌ಗಳಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಲಾಕರ್ ಸಮೇತ ತೆಗೆದುಕೊಂಡು, ಬೆಳ್ಳಿ ಒಡವೆಗಳನ್ನು ಅಲ್ಲಿಯೇ ಬಿಟ್ಟು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದಾರೆ. ವೇಣುಗೋಪಾಲ್ ಅವರು ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ 11ರ ಸುಮಾರಿಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ ಎಂದು ಹೇಳಿದರು.

ಬಟ್ಟೆ ಅಂಗಡಿಯಲ್ಲೇ ಗಿರವಿ ಅಂಗಡಿ ಸಹ ಹೊಂದಿದ್ದ ವೇಣುಗೋಪಾಲ್ ಅವರು, ಪಟ್ಟಣದ ಶಕ್ತಿ ದೇವತೆ ವಾಸವಿ ದೇವಿ ದೇವಸ್ಥಾನದ ಖಜಾಂಚಿಯಾಗಿದ್ದರು. ದೇವಸ್ಥಾನದ ಒಡವೆಗಳು ಹಾಗೂ ಗಿರವಿಗೆ ಸಂಬಂಧಿಸಿದ ಒಡವೆಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಡಿವೈಎಸ್ಪಿ ಪ್ರವೀಣ್‌ಕುಮಾರ್, ಇನ್‌ಸ್ಪೆಕ್ಟರ್ ಗಿರಿರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಸ್ಥಳಕ್ಕೆ ಕರೆಯಿಸಿ ಪರಿಶೀಲನೆ ನಡೆಸಲಾಗಿದೆ. ಸ್ಥಳಕ್ಕೆ ಮಾಜಿ ಶಾಸಕ ಎ. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.