ರಾಮನಗರ: ಬೇಸಿಗೆಯ ಬೇಗೆ ಹೆಚ್ಚಾಗುವುದಕ್ಕೆ ಮುಂಚೆ, 2023ರ ವರ್ಷಾಂತ್ಯಕ್ಕೆ ನಗರದ ನೀರಿನ ಬವಣೆ ನೀಗಲಿದೆ ಎಂದು ಕಾಯುತ್ತಿದ್ದ ಜನರ ನಿರೀಕ್ಷೆ ಹುಸಿಯಾಗಿದೆ. ರಾಮನಗರಕ್ಕೆ ಬರಬೇಕಿದ್ದ 24X7 ಕುಡಿಯುವ ನೀರಿಗೆ ವಿಘ್ನಗಳು ಎದುರಾಗುತ್ತಲೇ ಇವೆ. ಮತ್ತೊಂದು ವರ್ಷ ಕಳೆದು ಎರಡನೇ ತಿಂಗಳಿಗೆ ಕಾಲಿಟ್ಟರೂ ನೀರು ಮಾತ್ರ ಬಂದಿಲ್ಲ.
ರಾಮನಗರಕ್ಕೆ ನೀರು ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದಂತೆ, ಮಂಡ್ಯ ಜಿಲ್ಲೆಯ ಟಿ.ಕೆ. ಹಳ್ಳಿಯಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಘಟಕ ಹಾಗೂ ಪೂರೈಕೆ ಮಾರ್ಗಕ್ಕೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಕಳೆದ ಆಗಸ್ಟ್ನಲ್ಲಿ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ್ದರು.
ಕಾಮಗಾರಿಯನ್ನು ಪರಿಶೀಲನೆ ಮಾಡಿದ್ದ ಅವರು, ವರ್ಷಾಂತ್ಯ ಅಥವಾ ಜನವರಿಯಲ್ಲಿ ರಾಮನಗರಕ್ಕೆ ನೀರು ಪೂರೈಸುವ ನಿಟ್ಟಿನಲ್ಲಿ ಕಾಮಗಾರಿ ತ್ವರಿತಗೊಳಿಸುವಂತೆ ಸೂಚನೆ ನೀಡಿದ್ದರು. ಆದರೆ, ಕೆಲಸ ಮಾತ್ರ ಮುಗಿದಿಲ್ಲ.
ನೀರಿಗೆ ಹಾಹಾಕಾರ: ಬೇಸಿಗೆಯ ಬೇಗೆ ಹೆಚ್ಚಿದಂತೆ ನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಸದ್ಯ ನಗರದಲ್ಲಿ ಕನಿಷ್ಠ 4 ದಿನಗಳಿಂದ 10 ದಿನಗಳವರೆಗೆ ಒಮ್ಮೆ ನೀರು ಪೂರೈಕೆಯಾಗುವ ವಿವಿಧ ಪ್ರದೇಶಗಳಿವೆ. 24X7 ನೀರು ಬಂದರೆ ಈ ನಮ್ಮ ಬವಣೆಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಸದ್ಯ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್ಡಿಬಿ) ಮತ್ತು ನಗರಸಭೆಯು ನೀರಿನ ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡುತ್ತಿದೆ. ಕೊಳವೆಬಾವಿಗಳ ಮೂಲಕವೂ ನೀರು ಒದಗಿಸಲಾಗುತ್ತಿದೆ. ಇತ್ತೀಚೆಗೆ ನಗರಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಅವರು ಸಭೆ ನಡೆಸಿದ್ದಾಗಲೂ, ನೀರಿನ ಸಮಸ್ಯೆ ಕುರಿತು ಸದಸ್ಯರು ಗಮನ ಸೆಳೆದಿದ್ದರು. ಆಗ ಸಂಸದರು, ಹೆಚ್ಚುವರಿ ಟ್ಯಾಂಕರ್ಗಳಲ್ಲಿ ನೀರು ಪೂರೈಕೆಗೆ ಸೂಚನೆ ನೀಡಿದ್ದರು.
₹450 ಕೋಟಿ ಮೊತ್ತದ ಯೋಜನೆ: ರಾಮನಗರ ನಗರಸಭೆ ವ್ಯಾಪ್ತಿಯ ಜನರಿಗೆ ನೀರು ಪೂರೈಕೆ ಮಾಡುವ ಈ ಯೋಜನೆಯನ್ನು ₹450 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕೆಯುಡಬ್ಲ್ಯೂಎಸ್ಡಿಬಿ ಯೋಜನೆ ಅನುಷ್ಠಾನದ ಹೊಣೆ ಹೊತ್ತಿದೆ. ಟಿ.ಕೆ. ಹಳ್ಳಿಯಿಂದ ರಾಮನಗರಕ್ಕೆ ನೀರು ತರಲು ಸುಮಾರು 60 ಕಿ.ಮೀ. ಪೈಪ್ಲೈನ್ ಅಳವಡಿಕೆಗೆ ಯೋಜನೆ ರೂಪಿಸಲಾಗಿತ್ತು. ಬಹುತೇಕ ಕಾಮಗಾರಿ ಮುಗಿದಿದ್ದು, ಕೆಲವೆಡೆ ಸಮಸ್ಯೆಯಾಗಿದ್ದರಿಂದ ಇನ್ನೂ ಪೂರ್ಣಗೊಂಡಿಲ್ಲ.
‘ರಾಮನಗರದ ಮುಖ್ಯ ರಸ್ತೆಯಲ್ಲಿರುವ ಕೆಂಗಲ್ ಹನುಮಂತಯ್ಯ ವೃತ್ತದ ಬಳಿಯ ಅರ್ಕಾವತಿ ನದಿಯ ಬಳಿ ಹಾಗೂ ಬಿ.ಎಂ. ರಸ್ತೆಯ ಸೇತುವೆ ಬಳಿ ಪೈಪ್ಲೈನ್ ಅಳವಡಿಕೆ ಕೆಲಸ ನಡೆಯುತ್ತಿದೆ. ಸಮಸ್ಯೆ ಎದುರಾಗಿದ್ದ ಚನ್ನಮಾನಹಳ್ಳಿ ಹಾಗೂ ರೈಲ್ವೆ ಹಳಿ ಬಳಿಯೂ ಕೆಳ ಮಟ್ಟದಲ್ಲಿ ಪೈಪ್ಲೈನ್ ಅಳವಡಿಸಲಾಗುತ್ತಿದೆ. ಎಲ್ಲಾ ಮುಗಿಯಲು ಒಂದು ತಿಂಗಳು ಬೇಕಾಗುತ್ತದೆ’ ಎಂದು ಕೆಯುಡಬ್ಲ್ಯೂಎಸ್ಡಿಬಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾವೇರಿ ನದಿಯಿಂದ ಬಿಡಬ್ಲ್ಯೂಎಸ್ಎಸ್ಬಿಯವರು ಬೆಂಗಳೂರಿಗೆ ಪಂಪ್ ಮಾಡುವ ನೀರನ್ನು, ರಾಮನಗರಕ್ಕೆ ನೆಟಕಲ್ ಜಲ ಸಂಗ್ರಹಗಾರದಿಂದ ನಾವು ತೆಗೆದುಕೊಳ್ಳುತ್ತೇವೆ. ಮುಂಚೆ ನೀರು ತೊರೆಕಾಡನಹಳ್ಳಿಯಿಂದ ಗುರುವಿನಪುರ, ಚನ್ನಪಟ್ಟಣ ಹಾದು ರಾಮನಗರಕ್ಕೆ ಹೋಗುತ್ತಿತ್ತು. ಕಾಮಗಾರಿ ಮುಗಿದ ಬಳಿಕ, ಕಾರೇಕೊಪ್ಪ ಗೇಟ್ನಿಂದಲೇ ರಾಮನಗರಕ್ಕೆ ಪೈಪ್ಲೈನ್ ಮೂಲಕ ನೀರು ಹರಿಯಲಿದೆ. ಮಾರ್ಗಮಧ್ಯೆ, ಷರತ್ತಿನ ಪ್ರಕಾರ 12 ಗ್ರಾಮಗಳಿಗೆ ನಳದ ನೀರು ಕೊಡಲಾಗುವುದು’ ಎಂದು ಮಂಡಳಿ ಅಧಿಕಾರಿಗಳು ಹೇಳಿದರು.
62 ಎಂಎಲ್ಡಿ ಸಾಮರ್ಥ್ಯ: ‘ರಾಮನಗರದ ನೀರಿನ ಅಗತ್ಯ 2050ನೇ ವರ್ಷದಲ್ಲಿ ಎಷ್ಟಿರಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಸದ್ಯ ನಗರಕ್ಕೆ ಬೇಕಿರುವುದು 25 ಎಂಎಲ್ಡಿ ನೀರು ಮಾತ್ರ. ಸದ್ಯ ಟಿ.ಕೆ. ಹಳ್ಳಿಯಲ್ಲಿರುವ ಘಟಕವು 62 ಎಂಎಲ್ಡಿ ಸಾಮರ್ಥ್ಯದ್ದಾಗಿದೆ. ಪೂರೈಕೆಯಾಗುವ ನೀರು ಸಂಗ್ರಹಕ್ಕಾಗಿ, ರಾಮನಗರದ ಕೊತ್ತೀಪುರದಲ್ಲಿ 200 ಲಕ್ಷ ಲೀಟರ್ ಹಾಗೂ ಬೋಳಪ್ಪನಹಳ್ಳಿಯಲ್ಲಿ 100 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆ. ನೀರನ್ನು ಪಂಪ್ ಮಾಡಲು 800 ಎಚ್.ಪಿ ಯಂತ್ರಗಳನ್ನು ಅಳವಡಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಸರ್ಕಾರವೇ ಹೇಳುವಂತೆ, ಪ್ರತಿ ಪ್ರಜೆಗೆ ನಿತ್ಯ 135 ಲೀಟರ್ನಷ್ಟು ನೀರು ಸಿಗಬೇಕು. ಸದ್ಯ ಅಷ್ಟು ನೀರು ನಗರದ ಜನರಿಗೆ ಸಿಗುತ್ತಿಲ್ಲ. ನಗರಸಭೆ ವ್ಯಾಪ್ತಿಯ 31 ವಾರ್ಡ್ಗಳ ಪೈಕಿ, ಬಹುತೇಕ ವಾರ್ಡ್ಗಳಲ್ಲಿ ನೀರಿನ ಕೊರತೆ ಇದೆ. ಯಾವ ವಾರ್ಡ್ ಸಹ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ನೀರಿಗಾಗಿ ನಡೆದ ಪ್ರತಿಭಟನೆಗಳಿಗೂ ಲೆಕ್ಕವಿಲ್ಲ. ಪ್ರತಿಭಟನೆ ನಡೆಸಿ ಹೈರಾಣಾಗಿರುವ ಜನ, ಇದೀಗ 24X7 ನೀರಿನ ನಿರೀಕ್ಷೆಯಲ್ಲಿದ್ದಾರೆ.
‘ಡಿಸೆಂಬರ್ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕೆಲವೆಡೆ ಕಾಮಗಾರಿಗೆ ತೊಂದರೆ ಎದುರಾಗಿದ್ದರಿಂದ ವಿಳಂಬವಾಯಿತು. ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಇತ್ತೀಚೆಗೆ ಟೆಂಡರುದಾರರೊಂದಿಗೆ ಸಭೆ ನಡೆಸಿ ಮಾರ್ಚ್ ತಿಂಗಳೊಳಗೆ ಮುಗಿಸಲು ಸೂಚನೆ ನಿಡಲಾಗಿದೆ. ಬೆಂಗಳೂರು ಕುಡಿಯುವ ನೀರು ಸರಬರಾಜು ಮಂಡಳಿಯು (ಬಿಡಬ್ಲ್ಯೂಎಸ್ಎಸ್ಬಿ) ರಾಮನಗರಕ್ಕೆ ನೀರು ಪೂರೈಕೆ ಮಾಡುವ ಟಿ.ಕೆ. ಹಳ್ಳಿಯ ಘಟಕಕ್ಕೆ ನೀರು ಪೂರೈಕೆಗೆ ಅನುಮತಿ ಕೊಡಬೇಕು. ಜೊತೆಗೆ ಬೆಸ್ಕಾಂ ಮತ್ತು ಕೆಪಿಟಿಸಿಎಲ್ನಿಂದ ನೀರು ಪೂರೈಕೆಗೆ ಅಗತ್ಯವಿರುವ ವಿದ್ಯುತ್ ಸಂಪರ್ಕ ಸಿಗಬೇಕಿದೆ. ರಾಮನಗರ ವ್ಯಾಪ್ತಿಯ ಎರಡು ಕಡೆ ಪೈಪ್ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಸದ್ಯದಲ್ಲೇ ಅದು ಪೂರ್ಣಗೊಳ್ಳಬೇಕಿದೆ’ ಎಂದು ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್ಡಿಬಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.