ರಾಮನಗರ: ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದರಿಂದ ರಾಮನಗರ ತಾಲ್ಲೂಕಿನ ವಿವಿಧೆಡೆ ನದಿಗೆ ಅಡ್ಡವಾಗಿ ಇರುವ ಸೇತುವೆಗಳು ಹಾಗೂ ಒಡ್ಡುಗಳು ಮುಳುಗಡೆಯಾಗಿವೆ. ನದಿ ಪಕ್ಕ ಇರುವ ತೆಂಗಿನ ತೋಟ, ಅಡಿಗೆ ತೋಟ, ರೇಷ್ಮೆ ತೋಟ ಸೇರಿದಂತೆ ವಿವಿಧ ಬೆಳೆಗಳು ಜಲಾವೃತವಾಗಿವೆ.
ಕೂನಗಲ್ ಮತ್ತು ಕೆ.ಪಿ. ದೊಡ್ಡಿ ನಡುವಣ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿದ್ದು, ಎರಡೂ ಗ್ರಾಮಗಳ ಸಂಪರ್ ಕಡಿತಗೊಂಡಿದೆ. ಪಾಲಾಬೋವಿದೊಡ್ಡಿ, ಮದರಸಾಬದೊಡ್ಡಿ, ಹಳ್ಳಿಮಾಳ ಸೇರಿದಂತೆ ನದಿ ಆಸುಪಾಸಿನಲ್ಲಿರುವ ಗ್ರಾಮಗಳ ಬಹುತೇಕ ಜಮೀನುಗಳಿಗೆ ನೀರು ನುಗ್ಗಿದ್ದು ಬೆಳೆ ಹಾನಿಯಾಗಿದೆ.
ನದಿ ಮೈದುಂಬಿ ಹರಿಯುತ್ತಿರುವುದರಿಂದ ನದಿಯ ಅಕ್ಕಪಕ್ಕ ಇದ್ದ ಜಮೀನುಗಳಿಗೆ ರೈತರಿಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ. ರಭಸವಾಗಿ ಹರಿಯುತ್ತಿರುವ ನೀರಿನಿಂದಾಗಿ ರಾಮನಗರದ ಬಾಲಗೇರಿಯ ನದಿಯಂಚಿನ ಎರಡ್ಮೂರು ಮನೆಗಳ ಅಂಗಳಕ್ಕೆ ನೀರು ಹರಿದು ಬಂದಿದೆ. ಮತ್ತೆ ಮಳೆ ಹೆಚ್ಚಾದರೆ, ಮತ್ತಷ್ಟು ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.