ಶಿವಮೊಗ್ಗ: ಹಾವೇರಿ ಬಳಿ ನಡೆದ ಅಪಘಾತದಲ್ಲಿ ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿಯ ರಾಜ್ಯ ಅಂಧರ ಫುಟ್ಬಾಲ್ ತಂಡದ ಆಟಗಾರ್ತಿ ಎ.ಎಸ್. ಮಾನಸ ಸಾವಿಗೀಡಾಗಿದ್ದಾರೆ.
ಮಾನಸ ಎಮ್ಮೆಹಟ್ಟಿಯ ಶರಣಪ್ಪ ಹಾಗೂ ಭಾಗ್ಯ ದಂಪತಿ ಪುತ್ರಿ. ಅಪಘಾತದಲ್ಲಿ ಭಾಗ್ಯ ಕೂಡ ಸಾವನ್ನಪ್ಪಿದ್ದಾರೆ.
ಮಾನಸ ಹುಟ್ಟಿದಾಗಲೇ ಕಣ್ಣು ಕಳೆದುಕೊಂಡಿದ್ದರು.
ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಶಾರದಾ ಅಂಧ ಮಕ್ಕಳ ಶಾಲೆಯಲ್ಲಿ ಓದಿರುವ ಮಾನಸ, ಬಿಎಸ್ಸಿ ಮುಗಿಸಿದ್ದು, ಬೆಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದರು.
'ಮಾನಸಗೆ ಐಎಎಸ್ ಅಧಿಕಾರಿ ಆಗುವ ಕನಸು ಇತ್ತು. ರಾಜ್ಯ ಫುಟ್ಬಾಲ್ ತಂಡದ ನಾಯಕಿ ಆಗಿದ್ದಳು. ಈಚೆಗೆ ಮುಂಬೈ, ಕೋಲ್ಕತ್ತಾದಲ್ಲಿ ನಡೆದ ರಾಷ್ಟ್ರಮಟ್ಟದ ಫುಟ್ಬಾಲ್ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಳು. 2022ರಲ್ಲಿ ಕೇರಳದ ಕೊಚ್ಚಿಯಲ್ಲಿ ಜಪಾನ್ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ ಭಾರತ ತಂಡದಲ್ಲಿ ಆಡಿದ್ದಳು. ರಜೆಗೆ ಎಮ್ಮೆಹಟ್ಟಿಗೆ ಬಂದಿದ್ದವಳನ್ನು ಅಮ್ಮ ಸಂಬಂಧಿಕರ ಜೊತೆ ದೇವರ ದರ್ಶನಕ್ಕೆ ಕರೆದೊಯ್ದಿದ್ದರು' ಎಂದು ಮಾನಸ ಅಕ್ಕ ಮಹಾಲಕ್ಷ್ಮಿ 'ಪ್ರಜಾವಾಣಿ'ಗೆ ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.