ತೀರ್ಥಹಳ್ಳಿ: ತಾಲ್ಲೂಕಿನ ಬೇಗುವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬಿದರಹಳ್ಳಿ ಗ್ರಾಮದ ಇ.ಎಸ್. ಶ್ಯಾಮಣ್ಣ (66) ಮೃತಪಟ್ಟವರು. ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಹಾಡಿಗೆ ಹೆಜ್ಜೆ ಹಾಕುವ ವೇಳೆ ತಲೆಸುತ್ತು ಬಂದು ಬಿದ್ದು ಅಸ್ಪಸ್ಥಗೊಂಡಿದ್ದರು. ಈ ವೇಳೆ ಸ್ಥಳದಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಡಿಜೆ ವಿಪರೀತ ಸದ್ದಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ತೀರ್ಥಹಳ್ಳಿ ಪಟ್ಟಣದಲ್ಲಿ ಭಾನುವಾರ ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲೂ ವಿಪರೀತ ಪ್ರಮಾಣದ ಧ್ವನಿವರ್ಧಕ ಮತ್ತು ಲೇಸರ್ ಬಳಕೆ ಮಾಡಲಾಗಿದೆ. ಪರಿಣಾಮವಾಗಿ ಡ್ರೋಣ್, ಡಿಎಸ್ಎಲ್ಆರ್ ಕ್ಯಾಮೆರಾ, 150ಕ್ಕೂ ಹೆಚ್ಚು ಮೊಬೈಲ್ ಕ್ಯಾಮೆರಾ ಲೆನ್ಸ್, ಡಿಸ್ಪ್ಲೇ, ಆಜಾದ್ ರಸ್ತೆಯ ಡಿವೈಡರ್ ಮೇಲಿನ ಮರದಲ್ಲಿ ವಾಸವಾಗಿದ್ದ ಗುಬ್ಬಚ್ಚಿ, ಸಣ್ಣ ಪಕ್ಷಿಗಳು ಹೃದಯಾಘಾತದಿಂದ ಮೃತಪಟ್ಟಿವೆ. ಕೆಲವು ಪಕ್ಷಿಗಳು ಹಾರಿ ಹೋಗಿವೆ. ಕೆಲ ಅಂಗಡಿಗಳಲ್ಲಿ ವಸ್ತುಗಳು ಅಲ್ಲಾಡಿವೆ ಎಂದು ಪ್ರತ್ಯಕ್ಷದರ್ಶಿ ಸಂದೇಶ ಜವಳಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.