ಹೊಸನಗರ (ಶಿವಮೊಗ್ಗ ಜಿಲ್ಲೆ): ತಾಲ್ಲೂಕಿನಾದ್ಯಂತ ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು, ಮಹಿಳೆಯೊಬ್ಬರು ಜಮೀನಿನ ಪಕ್ಕದಲ್ಲಿ ಹರಿದಿರುವ ಹಳ್ಳ ದಾಟಲು ಅಳವಡಿಸಿದ್ದ ಕಾಲುಸಂಕದಿಂದ ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.
ತಾಲ್ಲೂಕಿನ ನಗರ ಹೋಬಳಿಯ ಬೈಸೆ ಗ್ರಾಮದ ಚೀಕಳಿ ನಿವಾಸಿ ರೈತ ಮಹಿಳೆ ಶಶಿಕಲಾ (43) ಮೃತರು.
ಶಶಿಕಲಾ ಅವರು ಬೆಳಿಗ್ಗೆ ಭತ್ತದ ಸಸಿ ನಾಟಿ ಮಾಡುವ ಉದ್ದೇಶದಿಂದ ಗದ್ದೆ ನೋಡಿಕೊಂಡು ಬರಲು ಜಮೀನಿಗೆ ಹೋದವರು ವಾಪಸ್ ಬಂದಿರಲಿಲ್ಲ. ಸ್ವಲ್ಪ ಸಮಯದ ನಂತರ ಕುಟುಂಬದವರು ಹುಡುಕಲು ಹೋದ ಸಂದರ್ಭದಲ್ಲಿ ಜಮೀನಿನ ಹತ್ತಿರದ ಸಂಕದಿಂದ ಒಂದು ಕಿ.ಮೀ. ದೂರದ ದುಮುಕದ ಗದ್ದೆ ಕಾಲುಸೇತುವೆ ಹತ್ತಿರದ ಹಳ್ಳದಲ್ಲಿ ಮೃತದೇಹವೊಂದು ಮರಕ್ಕೆ ಸಿಕ್ಕಿಹಾಕಿರುವುದು ಕಂಡುಬಂದಿದೆ.
ಪರಿಶೀಲಿಸಿದಾಗ ಮೃತದೇಹ ಶಶಿಕಲಾ ಅವರದ್ದು ಎಂದು ಗೊತ್ತಾಗಿದೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.