ಸೊರಬ: ಗ್ರಾಮೀಣ ಪ್ರದೇಶದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ಜನರಲ್ಲಿ ಸ್ವಯಂಪ್ರೇರಿತ ರಕ್ತದಾನದ ಅರಿವು ಮೂಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲ್ಲೂಕಿನ ಉದ್ರಿ ಗ್ರಾಮದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವೀರಭದ್ರೇಶ್ವರ ಯುವಕ ಸಂಘ, ಆರ್ಯುವೇದ ಆಸ್ಪತ್ರೆ ಹಾಗೂ ಉದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ರಿ, ವಡ್ಡಿಗೇರಿ, ಕುಮ್ಮೂರು, ಬಿಳಾಗಿ, ಮಂಚಿ, ಗುಡ್ಡೆಕೊಪ್ಪ, ಬಿದರಗೇರಿ, ಯಡಗೊಪ್ಪ, ಯಲವಾಟ, ಚಿಕ್ಕಾವಲಿ ಗ್ರಾಮಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ರಕ್ತದಾನ ಶ್ರೇಷ್ಠ ಕಾರ್ಯವಾಗಿದ್ದು, ರಕ್ತದಾನದಿಂದ ಸಾವು ಬದುಕಿನ ನಡುವೆ ಹೋರಾಡುವ ಜೀವಗಳನ್ನು ಉಳಿಸಲು ಅನುಕೂಲವಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆದಾಗ ಜನರಲ್ಲಿ ಜಾಗೃತಿ ಮೂಡಲು ಸಾಧ್ಯ’ ಎಂದು ತಿಳಿಸಿದರು.
ಉದ್ರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರನ್ನು ಒಗ್ಗೂಡಿಸಿಕೊಂಡು ಸತತ 4ನೇ ಬಾರಿಗೆ ಯಶಸ್ವಿಯಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮುಂದೆಯೂ ಸಮಾಜಮುಖಿ ಕಾರ್ಯಗಳಿಗೆ ಗ್ರಾಮಸ್ಥರು, ಸಂಘ ಸಂಸ್ಥೆಗಳು, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
‘ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಇಂತಹ ಶಿಬಿರಗಳ ಮೂಲಕ ದಾನಿಗಳಿಂದ ಸಂಗ್ರಹಿಸಿದ ರಕ್ತವು ತುರ್ತು ಸಂದರ್ಭದಲ್ಲಿ ಅವಶ್ಯವಿರುವ ರೋಗಿಗಳಿಗೆ ಲಭ್ಯವಾದಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ’ ಎಂದು ತಿಳಿಸಿದರು.
ಇಒ ಪ್ರದೀಪಕುಮಾರ್, ವೈದ್ಯಾಧಿಕಾರಿ ಪ್ರಭು ಸಾಹುಕಾರ್, ಡಾ.ಪರಮೇಶ್ವರ, ಮುಖ್ಯ ಶಿಕ್ಷಕ ಖಲೀಲ್ ಅಹಮದ್, ಗ್ರಾಮ ಪಂಚಾಯಿತಿ ಸದಸ್ಯರಾದ ಮನಸ್ವಿನಿ, ನೂರ್ಜಹಾನ್, ಬಂಗಾರಪ್ಪ, ಯಲ್ಲಪ್ಪ, ಬಸವರಾಜ್, ಕೆರೆಯಪ್ಪ ಯಡಗೊಪ್ಪ, ಯಲ್ಲಪ್ಪ, ಶಿವಪ್ಪ, ನಾಗರಾಜ್, ಮಹೇಶಗೌಡ, ಚಾಲುಕ್ಯ ಪಾಟೀಲ್, ತಾರಕೇಶ್, ದರ್ಶನ್, ದೇಸಾಯಿಗೌಡ, ಸದಾ ಪಾಟೀಲ್, ಸತೀಶಗೌಡ, ಪ್ರಕಾಶ್, ಪ್ರದೀಪ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.