ಶಿವಮೊಗ್ಗ: ಮೂರು ದಿನಗಳ ಕಾಲ ಸತತವಾಗಿ ತಜ್ಞರು ದುರಸ್ತಿ ಕಾರ್ಯಾಚರಣೆ ನಡೆಸಿದ ಫಲವಾಗಿ ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯದಲ್ಲಿನ ನದಿಮಟ್ಟದ ಸ್ಲುಸ್ ಗೇಟ್ನಲ್ಲಿ ಆಗುತ್ತಿದ್ದ ನೀರಿನ ಸೋರಿಕೆ ಭಾನುವಾರ ಮಧ್ಯಾಹ್ನ ನಿಲುಗಡೆಯಾಗಿದೆ.
ಜಲಾಶಯದ ನೀರು ಸೋರಿಕೆ ಆಗುತ್ತಿರುವುದು ನೋಡಿ ಜನರಲ್ಲಿ ಆತಂಕ ಶುರುವಾಗಿತ್ತು. ಮೂರು ದಿನಗಳಿಂದ ತಜ್ಞರು ನಿರಂತರ ದುರಸ್ತಿ ಕೆಲಸ ಮಾಡಿದ ಪರಿಣಾಮ ನೀರು ಸೋರಿಕೆ ತಡೆಗಟ್ಟಲಾಗಿದೆ.
ಕರ್ನಾಟಕ ನೀರಾವರಿ ನಿಗಮದ ಸಿಬ್ಬಂದಿ, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧೀನದ ಡ್ಯಾಂ ಸೇಫ್ಟಿ ರಿವ್ಯೂ ಪ್ಯಾನಲ್ (ಡಿಎಸ್ಆರ್ಪಿ) ಮತ್ತು ಡ್ಯಾಂ ಸೇಫ್ಟಿ ಆರ್ಗನೈಸೇಷನ್ (ಡಿಎಸ್ಒ)ನ ತಜ್ಞರು ತ್ವರಿತವಾಗಿ ಕಾರ್ಯಾಚರಣೆ ಮಾಡಿದ್ದಾರೆ. ಆಕ್ಸಿಜನ್ ಮಾಸ್ಕ್ ಧರಿಸಿಕೊಂಡು ತಜ್ಞರು ಸಮರೋಪಾದಿಯಲ್ಲಿ ಗೇಟ್ನ ದುರಸ್ತಿ ಮಾಡಿದ್ದಾರೆ.
6 ಮುಳುಗು ತಜ್ಞರು ಮತ್ತು ಕೊಡಗಿನಿಂದ ಬಂದಿದ್ದ 20 ಜನ ತಜ್ಞರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಹೈದರಾಬಾದ್ನ ಡಿಎಸ್ಆರ್ಪಿಯ ಗೇಟ್ ತಂತ್ರಜ್ಞರೊಬ್ಬರು ಆನ್ಲೈನ್ ಮೂಲಕವೇ ದುರಸ್ತಿ ಕಾರ್ಯಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಬಾವಿ ಅವರು ಕಾರ್ಯಾಚರಣೆಯ ಸಮನ್ವಯತೆ ನಡೆಸಿದ್ದರು.
ಅನುಭವಿ ತಾಂತ್ರಿಕ ತಂಡದ ಶ್ರಮದಿಂದ ಸ್ಲುಸ್ ಗೇಟ್ನಿಂದ ನೀರು ಹೊರಗೆ ಹೋಗುವುದು ತಪ್ಪಿದೆ. ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿಗೆ ನೀರು ಸಂಗ್ರಹಿಸಬಹುದು. ಮಳೆಗಾಲದಲ್ಲಿ ಜಲಾಶಯದಲ್ಲಿ ನೀರು ಸಂಗ್ರಹ ಆಗುತ್ತಿದ್ದ ಸಂದರ್ಭ ನೀರು ಸೋರಿಕೆ ಆಗುತ್ತಿರುವುದು ರೈತರಲ್ಲಿ ಆತಂಕ ಉಂಟುಮಾಡಿತ್ತು. ತ್ವರಿತವಾಗಿ ದುರಸ್ತಿ ಮಾಡುವ ಮೂಲಕ ಅಧಿಕಾರಿಗಳು ರೈತರ ಸಮಸ್ಯೆ ನೀಗಿಸಿದ್ದಾರೆ.
ತಜ್ಞರು ಸಮರ್ಪಕವಾಗಿ ದುರಸ್ತಿ ಕಾರ್ಯ ಮಾಡಿದ ಹಿನ್ನೆಲೆಯಲ್ಲಿ ಜಲಾಶಯದಲ್ಲಿ ಆಗುತ್ತಿದ್ದ ನೀರಿನ ಸೋರಿಕೆಯನ್ನು ಭಾನುವಾರ ಮಧ್ಯಾಹ್ನದಿಂದಲೇ ಸಂಪೂರ್ಣವಾಗಿ ತಡೆಗಟ್ಟಲಾಗಿದೆಎನ್.ರವಿಕುಮಾರ್, ಕಾರ್ಯನಿವಾರ್ಯಕ ಎಂಜನಿಯರ್ ಭದ್ರಾ ಜಲಾಶಯ ವಿಭಾಗ ಲಕ್ಕವಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.