ADVERTISEMENT

ಭದ್ರಾ ಜಲಾಶಯ; ಎಡದಂಡೆ ಕಾಲುವೆಗೆ ನೀರು ಸೋರಿಕೆ?

ಟೆಂಡರ್ ಹಂತದಲ್ಲಿಯೇ ಸ್ಥಗಿತಗೊಂಡಿದೆ ದುರಸ್ತಿ ಕಾರ್ಯ

ವೆಂಕಟೇಶ ಜಿ.ಎಚ್.
Published 12 ಆಗಸ್ಟ್ 2024, 0:10 IST
Last Updated 12 ಆಗಸ್ಟ್ 2024, 0:10 IST
ಲಕ್ಕವಳ್ಳಿಯ ಭದ್ರಾ ಜಲಾಶಯದ ನೋಟ
ಲಕ್ಕವಳ್ಳಿಯ ಭದ್ರಾ ಜಲಾಶಯದ ನೋಟ   

ಶಿವಮೊಗ್ಗ: ಮಧ್ಯ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಕುಡಿಯುವ ನೀರು ಹಾಗೂ ನೀರಾವರಿಗೆ ಆಸರೆಯಾಗಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಸೋರಿಕೆಯ ದುರಸ್ತಿ ಕಾರ್ಯ 3 ತಿಂಗಳ ಹಿಂದೆ ಟೆಂಡರ್‌ ಹಂತದಲ್ಲಿಯೇ ಸ್ಥಗಿತಗೊಂಡಿದೆ. ಇದರಿಂದ ನಿತ್ಯ 180 ಕ್ಯುಸೆಕ್‌ನಷ್ಟು ನೀರು ಜಲಾಶಯದಿಂದ ಕಾಲುವೆಗೆ ಸೋರಿಕೆಯಾಗುತ್ತಿದೆ. ಇದು ಭದ್ರಾ ಜಲಾಶಯದ ಸುರಕ್ಷತೆಗೂ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

ಭದ್ರಾ ಎಡದಂಡೆ ಕಾಲುವೆಯ ವಿಸ್ತಾರ ಶಿವಮೊಗ್ಗ ಹಾಗೂ ಭದ್ರಾವತಿ ತಾಲ್ಲೂಕುಗಳಲ್ಲಿ 77 ಕಿ.ಮೀ ದೂರ ಹಾದು ಹೋಗಿದೆ. ಕಾಲುವೆಯಲ್ಲಿ ಸಾಮಾನ್ಯವಾಗಿ ಪ್ರತಿ ದಿನ 360 ಕ್ಯುಸೆಕ್ ನೀರು ಹರಿಯುತ್ತದೆ. ಸೋರಿಕೆ ಪ್ರಮಾಣ ಅದರ ಅರ್ಧದಷ್ಟು ಇದೆ. 

₹ 6.37 ಕೋಟಿ ವೆಚ್ಚದ ಯೋಜನೆ:

ಎಡದಂಡೆ ಕಾಲುವೆಗೆ ನೀರು ಸೋರಿಕೆ ಆಗುತ್ತಿರುವುದು ಕಂಡು ಬರುತ್ತಿದ್ದಂತೆಯೇ ದುರಸ್ತಿ ಕಾರ್ಯಕ್ಕೆ ₹ 6.37 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದ ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌) 2024ರ ಏಪ್ರಿಲ್‌ 25ರಂದು ಟೆಂಡರ್ ಕರೆದಿತ್ತು. ಆಗ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಚುನಾವಣಾ ಆಯೋಗದಿಂದ ಅನುಮತಿ ಪಡೆದು ಮೇ 1ರಂದು ಟೆಂಡರ್‌ನ ಪತ್ರಿಕಾ ಪ್ರಕಟಣೆ ಕೂಡ ನೀಡಲಾಗಿತ್ತು.

ADVERTISEMENT

ಮಾಹಿತಿ ಹಕ್ಕು ಕಾರ್ಯಕರ್ತರ ಆಕ್ಷೇಪ:

ಹೇಮಾವತಿ ನಾಲೆಯ ಸೋರಿಕೆ ತಡೆಗೆ ರೂಪಿಸಿದ್ಧ ಯೋಜನಾ ವೆಚ್ಚಕ್ಕಿಂತ ಭದ್ರಾ ಎಡದಂಡೆ ಕಾಲುವೆಯ ದುರಸ್ತಿ ಕಾರ್ಯದ ಟೆಂಡರ್‌ ಮೊತ್ತ ಹೆಚ್ಚಾಗಿದೆ ಎಂದು ಆರೋಪಿಸಿ, ಶಿವಮೊಗ್ಗ, ಭದ್ರಾವತಿ ತಾಲ್ಲೂಕಿನ ಬಾರಂದೂರು ಹಾಗೂ ಶಂಕರಘಟ್ಟದ ಮೂವರು ಮಾಹಿತಿ ಹಕ್ಕು ಕಾರ್ಯಕರ್ತರು ಜಲಸಂಪನ್ಮೂಲ ಇಲಾಖೆಗೆ ದೂರು ಸಲ್ಲಿಸಿದ್ದರು. ಹೀಗಾಗಿ ದುರಸ್ತಿ ಕಾರ್ಯ ತಡೆ ಹಿಡಿದ ಸರ್ಕಾರ, ಯೋಜನಾ ವೆಚ್ಚದ ಪರಿಶೀಲನೆಗೆ ತಜ್ಞರ ನೇತೃತ್ವದ ತಾಂತ್ರಿಕ ಸಮಿತಿ ರಚಿಸಿತ್ತು.

ಪರಿಶೀಲನೆ ನಡೆಸಿದ ತಾಂತ್ರಿಕ ಸಮಿತಿ, ಹೇಮಾವತಿ ನಾಲೆ ಸೋರಿಕೆಯ ದುರಸ್ತಿಗೂ ಇಲ್ಲಿನ ಕಾಮಗಾರಿಗೂ ತಾಂತ್ರಿಕತೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಯೋಜನಾ ವೆಚ್ಚದಲ್ಲಿ ಅನಗತ್ಯ ಹೆಚ್ಚಳ ಆಗಿಲ್ಲ ಎಂದು ಕಳೆದ ಜೂನ್‌ನಲ್ಲಿ ವರದಿ ನೀಡಿದೆ. ಆ ವೇಳೆಗೆ ಮಳೆ ಆರಂಭವಾಗಿದ್ದರಿಂದ ಟೆಂಡರ್‌ಗೆ ಒಪ್ಪಿಗೆ ಕೊಡುವ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

ಆಳ ಜಲಾಶಯದಲ್ಲಿ ಕೆಲಸ:

1962ರಲ್ಲಿ ಗಾರೆ, ಸುಣ್ಣ ಹಾಗೂ ಕಲ್ಲು ಬಳಸಿ ಭದ್ರಾ ಜಲಾಶಯ ಕಟ್ಟಲಾಗಿದೆ. ಅದರ ನೆಲಮಟ್ಟದಿಂದ 35 ಅಡಿ ಎತ್ತರದಲ್ಲಿ ಕಲ್ಲು ಕಿತ್ತು ಹೋಗಿವೆ. ಅಲ್ಲಿಂದಲೇ ಕಾಲುವೆಗೆ ನೀರು ಸೋರಿಕೆ ಆಗುತ್ತಿದೆ. ಟೆಂಡರ್ ಕರೆದಾಗ ಜಲಾಶಯದಲ್ಲಿ ನೀರಿನ ಒತ್ತಡವೂ ಕಡಿಮೆ ಇತ್ತು. ಈಗ ಜಲಾಶಯದಲ್ಲಿ 150 ಅಡಿ ಆಳದಲ್ಲಿ ನೀರಿನಲ್ಲಿ ಮುಳುಗಿ ಕೆಲಸ ಮಾಡಬೇಕಿದೆ. ಸದ್ಯ ಕಾಲುವೆಗಳಿಗೆ ನೀರು ಹರಿಸುವ ಗೇಟ್‌ಗಳಿಗೆ ಇನ್ನೂ ತೊಂದರೆ ಆಗಿಲ್ಲ ಎಂದು ಮೂಲಗಳು ಹೇಳುತ್ತವೆ.

‘ಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರಿನ ಸೋರಿಕೆ ಗಮನಕ್ಕೆ ಬಂದಿಲ್ಲ. ಸದ್ಯ ಕಾಲುವೆಗೆ ನೀರು ಹರಿಸಿದ್ದೇವೆ. ಅದು ಹೋಗುತ್ತಿದೆ. ಸೋರಿಕೆ ಆಗುತ್ತಿರುವ ಬಗ್ಗೆ ನಿಮ್ಮ ಬಳಿ ಬಳಿ (‍ಪ್ರಜಾವಾಣಿ) ದಾಖಲೆ ಇದ್ದರೆ ಕೊಡಿ’ ಎಂದು ಕೆಎನ್‌ಎನ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಭಾವಿ ಕೇಳಿದರು. ದುರಸ್ತಿಗೆ ಟೆಂಡರ್ ಕರೆಯಲಾಗಿತ್ತಲ್ಲ? ಎಂಬ ಪ್ರಶ್ನೆಗೆ, ‘ಅದು ನನಗೆ ಗೊತ್ತಿಲ್ಲ’ ಎಂದು ಹೇಳಿ ಕರೆ ಕಡಿತಗೊಳಿಸಿದರು.

ಭದ್ರಾ ಜಲಾಶಯದ ನೋಟ
ನಾಲ್ಕು ದಿನಗಳಲ್ಲಿ ಸ್ಲುಸ್ ಗೇಟ್ ದುರಸ್ತಿ
ಹೊಸಪೇಟೆಯ ತುಂಗಭದ್ರಾ ಜಲಾಶಯ ತುಂಬಿದ ನಂತರ ಗೇಟ್ ಕಿತ್ತುಹೋಗಿದ್ದರೆ ಭದ್ರಾ ಜಲಾಶಯದಲ್ಲಿನ ನದಿಮಟ್ಟದ ಸ್ಲುಸ್ ಗೇಟ್‌ ಎರಡು ತಿಂಗಳ ಹಿಂದೆ ಜಲಾಶಯದಲ್ಲಿ ಶೇ 30ರಷ್ಟು ನೀರಿದ್ದಾಗ ಕ್ಯಾಲ್ಸಿನೇಶನ್‌ ಸಮಸ್ಯೆಯಿಂದ ಕಿತ್ತು ಹೋಗಿತ್ತು. ಇದರಿಂದ ನಾಲ್ಕು ದಿನಗಳಲ್ಲಿ 0.34 ಟಿಎಂಸಿ ಅಡಿ ನೀರು ನದಿಗೆ ಹರಿದಿತ್ತು. ಸಮರೋಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮುಳುಗು ತಜ್ಞರ ನೆರವಿನಿಂದ ನೀರಿನ ಆಳದಲ್ಲಿ ಕಾರ್ಯಾಚರಣೆ ನಡೆಸಿ ಗೇಟ್ ದುರಸ್ತಿ ಮಾಡಿದ್ದರು. ಭದ್ರಾ ಜಲಾಶಯದ ಸುರಕ್ಷೆಗೆ ಕರ್ನಾಟಕ ನೀರಾವರಿ ನಿಗಮವು ಕೇಂದ್ರೀಯ ಜಲ ಆಯೋಗದ (ಸಿಡಬ್ಲ್ಯುಸಿ) ಅಧೀನದ ಜಲಾಶಯಗಳ ಪುನರುತ್ಥಾನ ಹಾಗೂ ಅಭಿವೃದ್ಧಿ ಯೋಜನೆ (Dam Rehabitaton and Improvement Project–Drip) ಅಡಿ ತಾಂತ್ರಿಕ ಹಾಗೂ ಆರ್ಥಿಕ ನೆರವು ಕೋರಿದೆ. ಇದಕ್ಕಾಗಿ ₹ 100 ಕೋಟಿ ಮೊತ್ತದ ಯೋಜನಾ ವರದಿ ಕೂಡ ಸಿದ್ಧಪಡಿಸಿ ಕಳುಹಿಸಿದೆ.
ತುಂಗಾ ಜಲಾಶಯ: ವೈ ರೋಪ್‌ನಲ್ಲಿ ದೋಷ
ಗಾಜನೂರಿನ ತುಂಗಾ ಜಲಾಶಯದ 22 ಗೇಟ್‌ಗಳ ಪೈಕಿ ಎಂಟನೇ ಸಂಖ್ಯೆಯ ಗೇಟ್‌ನ ವೈ ರೋಪ್‌ನಲ್ಲಿ (ಗೇಟ್ ಎತ್ತುವ ಉಕ್ಕಿನ ಹಗ್ಗ) ಡ್ಯಾಮೇಜ್ ಕಾಣಿಸಿಕೊಂಡಿದೆ. ಹೀಗಾಗಿ ಜಲಾಶಯದ 21 ಗೇಟ್‌ಗಳನ್ನು ಮಾತ್ರ ತೆರೆದು ನದಿಗೆ ನೀರು ಹರಿಸಲಾಗಿದೆ. ‘ಗೇಟ್‌ನ ವೈ ರೋಪ್‌ ದುರಸ್ತಿಗೆ ಈಗಾಗಲೇ ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಈ ಬಾರಿ ಗುತ್ತಿಗೆದಾರರು ಮುಂದೆ ಬಂದಿದ್ದಾರೆ. ಅದರ ದುರಸ್ತಿ ಕಾರ್ಯ 15ರಿಂದ 20 ದಿನಗಳಲ್ಲಿ ಮುಗಿಸಲಿದ್ದೇವೆ’ ಎಂದು ತುಂಗಾ ಜಲಾಶಯ ಯೋಜನಾ ವಿಭಾಗದ ಎಂಜಿನಿಯರ್ ತಿಪ್ಪಾನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಕಾರ್ಗಲ್‌ನ ಲಿಂಗನಮಕ್ಕಿ ಹೊಸನಗರ ತಾಲ್ಲೂಕಿನ ಮಾಣಿ ಸಾವೇಹಕ್ಲು ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಗಳಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.