ಶಿವಮೊಗ್ಗ: ನಟ ಪುನೀತ್ರಾಜ್ಕುಮಾರ್ ಅವರ ಮಾನವೀಯತೆಯ ಮೌಲ್ಯ, ಸಾಧನೆ ದೇಶದಾದ್ಯಂತ ಬಿತ್ತರಿಸುವ ಉದ್ದೇಶದಿಂದ ಕೊಯಮತ್ತೂರಿನ ಯುವಕ ಮುತ್ತು ಸೆಲ್ವಂ ಸೈಕಲ್ ಪ್ರವಾಸ ಮಾಡುತ್ತಾ ಸೋಮವಾರ ನಗರಕ್ಕೆ ಭೇಟಿ ನೀಡಿದರು.
ಈ ಪ್ರವಾಸದೊಂದಿಗೆ ಗಿನ್ನಿಸ್ ದಾಖಲೆಯ ಗುರಿ ಹಾಗೂ ಪ್ರತಿ ಊರಿಗೂ ಭೇಟಿ ನೀಡಿದಾಗ ಅಪ್ಪು ಹೆಸರಿನಲ್ಲಿ ಗಿಡ ನಡೆವ ಉದ್ದೇಶ ಮುತ್ತು ಸೆಲ್ವಂ ಹೊಂದಿದ್ದಾರೆ.
ಈ ಕುರಿತ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪ್ರವಾಸಕ್ಕೂ ಮೊದಲು ಬೆಂಗಳೂರಿನಲ್ಲಿ ಅಪ್ಪು ಮನೆಗೆ ತೆರಳಿ, ಅಶ್ವಿನಿ ಪುನೀತ್ ಅವರನ್ನು ಭೇಟಿ ಮಾಡಿ ಪ್ರವಾಸದ ಉದ್ದೇಶ ತಿಳಿಸಿದಾಗ ಪ್ರವಾಸದಲ್ಲಿ ಸಹಾಯವಾಗಲಿ ಎಂದು ಪುನೀತ್ರಾಜ್ಕುಮಾರ್ ಬಳಸಿದ್ದ ಕೂಲಿಂಗ್ ಗ್ಲಾಸ್ ಕೊಡುಗೆ ನೀಡಿದರು. ಅದು ನನ್ನ ಪ್ರವಾಸವನ್ನು ತಂಪಾಗಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಪ್ರವಾಸದೊಂದಿಗೆ 20 ಸಾವಿರ ಕಿ.ಮೀ. ಕ್ರಮಿಸಿದ್ದೇನೆ. ಉದ್ದೇಶಿತ ಪ್ರವಾಸದ ದೂರ 36,300 ಕಿಲೋ ಮೀಟರ್. 1111 ದಿನಗಳ ಸೈಕಲ್ ಪ್ರವಾಸವನ್ನು 2021ರ ಡಿಸೆಂಬರ್ 21ರಂದು ಪ್ರಾರಂಭಿಸಿ, 2025ರ ಜನವರಿ 5ರಂದು ಮುಕ್ತಾಯಗೊಳಿಸಲು ಉದ್ದೇಶಿಸಿದ್ದೇನೆ. ಪ್ರವಾಸದಲ್ಲಿ 34 ರಾಜ್ಯಗಳು ಹಾಗೂ 733 ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ ಎಂದರು.
ಅಭಿಮಾನಕ್ಕೆ ಪ್ರೇರಣೆ: ಸ್ನೇಹಿತನ ಕುಟುಂಬ ಸದಸ್ಯರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರು. ಆಗ ನಟ ಪುನೀತ್ರಾಜ್ಕುಮಾರ್ ಅವರು ‘ಬಂಗಾರದ ಸರ’ವನ್ನು ಆಸ್ಪತ್ರೆ ವೆಚ್ಚ ಭರಿಸಲು ನೀಡಿದ್ದರು. ಅಂದಿನಿಂದ ಅವರಿಗೆ ಅಭಿಮಾನಿಯಾದೆ. ಪ್ರವಾಸ ಪೂರ್ಣಗೊಂಡ ನಂತರ ‘ಫ್ಯಾನ್ ಆಫ್ ಅಪ್ಪು‘ ಎಂಬ ಹೆಸರಿನ ಪುಸ್ತಕ ಬಿಡುಗಡೆಗೊಳಿಸುವ ಚಿಂತನೆ ಇದೆ ಎಂದರು.
ತಮಿಳುನಾಡು ಮೂಲದವರಾಗಿದ್ದರೂ ಅಪ್ಪು ಮೇಲಿನ ಪ್ರೀತಿ ಹಾಗೂ ಗೌರವದ ಸಂಕೇತವಾಗಿ ಸೈಕಲಿಗೆ ಅಪ್ಪುವಿನ ಭಾವಚಿತ್ರ ಲಗ್ಗತ್ತಿಸಿ, ಗಂಧದಗುಡಿ ಚಿತ್ರದ ಅಪ್ಪು ಭಾವಚಿತ್ರವಿರುವ ಟಿಶರ್ಟ್ ಧರಿಸಿ, ಸೈಕಲ್ ಪ್ರವಾಸ ಮಾಡುತ್ತಿರುವುದು ಅಪ್ಪು ಮೇಲಿನ ಅಭಿಮಾನಕ್ಕೆ ಸಾಕ್ಷಿ ಹೇಳಿತು.
ಪ್ರವಾಸದುದ್ದಕ್ಕೂ ಸೆಲ್ವಂ ಅವರು ಜಿಲ್ಲಾಧಿಕಾರಿ ಕಚೇರಿ , ತಾಲ್ಲೂಕು ಕಚೇರಿ, ಡಿವೈಎಸ್ಪಿ ಕಚೇರಿ, ಪುರಸಭೆ, ತಾಲ್ಲೂಕು ಪಂಚಾಯ್ತಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳಿಂದ ದಾಖಲೆ ಪುಸ್ತಕಕ್ಕೆ ಸಹಿ ಪಡೆದು, ಫೋಟೊ ಕ್ಲಿಕ್ಕಿಸಿಕೊಂಡು, ಪ್ರವಾಸವನ್ನು ಸಾಕ್ಷೀಕರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.