ಕುಂಸಿ (ಶಿವಮೊಗ್ಗ): ಸಮೀಪದ ಮುದ್ದಿನಕೊಪ್ಪ ಟ್ರೀ ಪಾರ್ಕ್ ಬಳಿಯ ಬಿ.ಎಚ್.ರಸ್ತೆಯಲ್ಲಿ ಇನೊವಾ ಹಾಗೂ ಸ್ವಿಫ್ಟ್ ಕಾರುಗಳ ನಡುವೆ ಶನಿವಾರ ಮಧ್ಯಾಹ್ನ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಸ್ವಿಫ್ಟ್ನಲ್ಲಿದ್ದ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ದೊಡ್ಡೇರಿಯ ಸಿದ್ದಯ್ಯ (56), ಬೆಳಲಗೆರೆಯ ಇಮಾಮ್ ಸಾಬ್ (56) ಹಾಗೂ ಚಾಲಕ, ಚಳ್ಳಕೆರೆ ನಗರದ ಚಿತ್ತಯ್ಯನಹಟ್ಟಿಯ ಚಂದ್ರಶೇಖರ್ (32) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜೆ.ಜೆ.ಹಟ್ಟಿಯ ಓಬಮ್ಮ (50) ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಇನೊವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಮಾರತ್ತಹಳ್ಳಿಯ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ವಿಫ್ಟ್ ಕಾರಿನಲ್ಲಿದ್ದವರು ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಕಟ್ಟೆಯ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಊರಿಗೆ ತೆರಳಲು ಶಿವಮೊಗ್ಗದ ಕಡೆ ಹೋಗುತ್ತಿದ್ದರು. ಇನೊವಾ ಕಾರಿನಲ್ಲಿದ್ದವರು ಪ್ರವಾಸಕ್ಕೆ ಬಂದಿದ್ದು, ನಗರದ ರೆಸಾರ್ಟ್ನಲ್ಲಿ ಉಳಿದಿದ್ದರು. ಜೋಗ ಜಲಪಾತ ವೀಕ್ಷಣೆಗೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.