ADVERTISEMENT

ಅಳತೆಯಲ್ಲಿ ಗ್ರಾಹಕರಿಗೆ ವಂಚಿಸಿದ ಗ್ಯಾಸ್ ಬಂಕ್ ಮುಟ್ಟುಗೋಲು

ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಕ್ರಮ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 16:08 IST
Last Updated 10 ಜುಲೈ 2024, 16:08 IST
ಸಾಗರದ ಆವಿನಹಳ್ಳಿ ರಸ್ತೆಯ ಗಜಾನನ ರೈಸ್ ಮಿಲ್ ಎದುರಿನ ಗ್ಯಾಸ್ ಬಂಕ್
ಸಾಗರದ ಆವಿನಹಳ್ಳಿ ರಸ್ತೆಯ ಗಜಾನನ ರೈಸ್ ಮಿಲ್ ಎದುರಿನ ಗ್ಯಾಸ್ ಬಂಕ್   

ಸಾಗರ: ಅಳತೆಯಲ್ಲಿ ಗ್ರಾಹಕರಿಗೆ ವಂಚಿಸಿದ ಆರೋಪದ ಮೇರೆಗೆ ನಗರದ ಆವಿನಹಳ್ಳಿ ರಸ್ತೆಯ ಗಜಾನನ ರೈಸ್ ಮಿಲ್ ಎದುರಿನ ಗ್ಯಾಸ್ ಬಂಕ್ ಅನ್ನು ಬುಧವಾರ ಕಾನೂನು ಮಾಪನ ಶಾಸ್ತ್ರ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. 

ಗೋಗ್ಯಾಸ್ ಎಲ್‌ಪಿಜಿ ಕಂಪೆನಿಯ ಮಾಲೀಕತ್ವದ ಸ್ಥಳೀಯ ಶಾಖಾ ಘಟಕವನ್ನು ಶಿವಮೊಗ್ಗದ ಎಂ.ಆರ್.ಮಹೇಶ್ವರಪ್ಪ ಎಂಬುವವರಿಗೆ ನಡೆಸಲು ಗುತ್ತಿಗೆ ನೀಡಲಾಗಿತ್ತು. ವಾಹನಗಳಿಗೆ ಗ್ಯಾಸ್ ತುಂಬುವ ಘಟಕದಲ್ಲಿನ ಮದರ್ ಬೋರ್ಡ್ ಅನ್ನು ಅಳತೆಯ ನಿಖರತೆ ಕಾಪಾಡುವ ಸಲುವಾಗಿ ನಿಯಮಿತ ಅವಧಿಯವರೆಗೆ ಕಾನೂನು ಮಾಪನ ಶಾಸ್ತ್ರ ಇಲಾಖೆ ಪರಿಶೀಲನೆ ನಡೆಸಿ ಅದರ ಮೇಲೆ ಮುದ್ರೆ ಹಾಕುವ ನಿಯಮ ಚಾಲ್ತಿಯಲ್ಲಿದೆ.

ಎಂ.ಆರ್.ಮಹೇಶ್ವರಪ್ಪ ಅವರು ಅಳತೆಯಲ್ಲಿ ಗ್ರಾಹಕರಿಗೆ ವಂಚಿಸುವ ಉದ್ದೇಶದಿಂದ ಇಂಧನ ತುಂಬುವ ಘಟಕದಲ್ಲಿನ ಮದರ್ ಬೋರ್ಡ್‌ನ ಸೀಲ್ ಅನ್ನು ಒಡೆದು ಪ್ರತ್ಯೇಕ ಮದರ್ ಬೋರ್ಡ್ ಅಳವಡಿಸಿರುವುದು ಗೋಗ್ಯಾಸ್ ಕಂಪೆನಿ ಗಮನಕ್ಕೆ ಬಂದಿತ್ತು.

ADVERTISEMENT

ಕಳೆದ ಜುಲೈ 5ರಂದು ಗೋಗ್ಯಾಸ್ ಕಂಪೆನಿಯ ವಿಚಕ್ಷಣ ದಳದ ಸಿಬ್ಬಂದಿ ಪರಿಶೀಲನೆ ನಡೆಸಲು ಸ್ಥಳಕ್ಕೆ ಆಗಮಿಸಿದಾಗ ಎಂ.ಆರ್.ಮಹೇಶ್ವರಪ್ಪ ಇಂಧನ ತುಂಬುವ ಘಟಕದಲ್ಲಿನ ಮದರ್ ಬೋರ್ಡ್ ಅನ್ನು ಬದಲಾಯಿಸುತ್ತಿರುವುದನ್ನು ಗಮನಕ್ಕೆ ಬಂದಿದೆ. ಕಂಪೆನಿ ಸಿಬ್ಬಂದಿ ಬಂದಿರುವುದು ಗೊತ್ತಾಗುತ್ತಿದ್ದಂತೆ ಮಹೇಶ್ವರಪ್ಪ ಸ್ಥಳದಿಂದ ಪರಾರಿಯಾಗಿದ್ದಾರೆ.

ತದನಂತರ ಜುಲೈ 8ರ ತಡರಾತ್ರಿ ಗೋಗ್ಯಾಸ್ ಕಂಪೆನಿ ಈ ಸಂಬಂಧ ಶಿವಮೊಗ್ಗದ ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ದೂರು ನೀಡಿದ್ದು ಬುಧವಾರ ಸ್ಥಳಕ್ಕೆ ಆಗಮಿಸಿದ ಇಲಾಖೆಯ ಸಹಾಯಕ ನಿಯಂತ್ರಕ ರಾಜು ಎಚ್.ಎಸ್. ಹಾಗೂ ಸಿಬ್ಬಂದಿ ವರ್ಗದವರು ಮಹಜರ್ ಕ್ರಮ ಜರುಗಿಸಿ  ಬಂಕ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಗ್ರಾಹಕರಿಗೆ ವಂಚಿಸಿದ ಆರೋಪದ ಮೇರೆಗೆ ಎಂ.ಆರ್.ಮಹೇಶ್ವರಪ್ಪ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಕಾನೂನು ಮಾಪನ ಕಾಯ್ದೆ ಕಲಂ 26 ರಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.