ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಇಲ್ಲಿನ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಮಂಗಳವಾರ ಬೆಳಿಗ್ಗೆ ನದಿಗೆ ನೀರು ಹರಿಸಲಾಯಿತು. ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ಗಳನ್ನು ತೆರೆದು ನದಿಗೆ ನೀರು ಬಿಡಲಾಯಿತು.
ಜಲಾಶಯದ ಮಟ್ಟ ಬೆಳಿಗ್ಗೆ 6 ಗಂಟೆಗೆ 183.2 ಅಡಿಗೆ ಏರಿಕೆಯಾಗಿದೆ. ಜಲಾಶಯದ ಗರಿಷ್ಠಮಟ್ಟ 186 ಅಡಿ. ಆದರೆ ಸುರಕ್ಷತೆಯ ದೃಷ್ಟಿಯಿಂದ ಪ್ರತೀ ಬಾರಿ 184 ಅಡಿಯವರೆಗೆ ಮಾತ್ರ ನಿಲ್ಲಿಸಲಾಗುತ್ತದೆ.
ಮಳೆಯ ಆರ್ಭಟ ಮತ್ತೆ ಹೆಚ್ಚಳವಾಗಿರುವುದರಿಂದ ಒಳಹರಿವು 20,774 ಕ್ಯುಸೆಕ್ ಗೆ ಏರಿಕೆಯಾಗಿದೆ. ಸೋಮವಾರ 18,381 ಕ್ಯುಸೆಕ್ ಒಳಹರಿವು ದಾಖಲಿಸಿತ್ತು. ಸದ್ಯ ಹೊರ ಹರಿವು 1954 ಕ್ಯುಸೆಕ್ ಇದೆ.
ಕಳೆದ ಎರಡು ವರ್ಷಗಳಲ್ಲಿ ಭದ್ರೆ ಮೊದಲ ಬಾರಿಗೆ ಭರ್ತಿ ಆಗಿದ್ದಾಳೆ. ಹಿಂದಿನ ವರ್ಷ ಮಳೆ ಕೊರತೆಯಿಂದ ಜಲಾಶಯ ತುಂಬಿರಲಿಲ್ಲ.
ಭದ್ರಾ ಜಲಾಶಯಕ್ಕೆ ಕಳೆದ ವರ್ಷ ಇದೇ ಅವಧಿಯಲ್ಲಿ 161.6 ಅಡಿ ನೀರಿನ ಸಂಗ್ರಹ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.